ಚನ್ನಪಟ್ಟಣ: ತಾಲೂಕಿನಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆಹಿಡಿದಿದ್ದ ಅರಣ್ಯ ಇಲಾಖೆ ಆನೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಆನೆಯನ್ನು ಮರಳಿ ಕಾಡಿಗೆ ಬಿಟ್ಟಿದೆ.

ಜಿಲ್ಲೆ ಸೇರಿದಂತೆ ತಾಲೂಕು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿತ್ತು. ಅರಣ್ಯ ಇಲಾಖೆ ಎರಡು ಪುಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಗುರುವಾರ ಬೆಳಗ್ಗೆ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಬಳಿ ೩೫ ವರ್ಷದ ಗಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿತ್ತು. ಆದರೆ, ಸೆರೆಹಿಡಿದ ಆನೆಯನ್ನು ಲಾರಿಗೆ ಹತ್ತಿಸುವ ವೇಳೆ ಆನೆಯ ಆರೋಗ್ಯ ತಪಾಸಣೆ ನಡೆಸಿದ ವೈದ್ಯರಿಗೆ ಆನೆಯ ದೇಹದ ತಾಪಮಾನದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಆನೆಯನ್ನು ಮತ್ತೆ ಕಾಡಿಗೆ ಬಿಡಲಾಗಿದೆ ಎಂದು ಆರ್‌ಎಫ್‌ಒ ಮಲ್ಲೇಶ್ ಮಾಹಿತಿ ನೀಡಿದ್ದಾರೆ.

ಚಿಕ್ಕಮಣ್ಣುಗುಡ್ಡೆ ಬಳಿ ಸೆರೆ:

ಎರಡು ಪುಂಡಾನೆಗಳ ಸೆರೆಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ನಾಗರಹೊಳೆ ಹಾಗೂ ದುಬಾರೆ ಆನೆ ಶಿಬಿರದಿಂದ 6 ಪಳಗಿದ ಆನೆಗಳು ಆಗಮಿಸಿದ್ದವು. ಗುರುವಾರ ಬೆಳಗ್ಗೆ ಚಿಕ್ಕಮಣ್ಣುಗುಡ್ಡೆ ಬಳಿ ಪುಂಡಾನೆ ಬೀಡು ಬಿಟ್ಟಿತ್ತು. ವೈದ್ಯರು ಅರವಳಿಕೆ ತುಂಬಿದ ಸಿರಂಜನ್ನು ಪುಂಡಾನೆಗೆ ಶೂಟ್ ಮಾಡಿ ಪ್ರಜ್ಞೆ ತಪ್ಪಿಸಿದರು. ಪಳಗಿದ ಆನೆಗಳ ಸಹಾಯದಿಂದ ಪುಂಡಾನೆಯನ್ನು ಲಾರಿ ಸಮೀಪಕ್ಕೆ ಕರೆತರುವ ವೇಳೆ ಆನೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಅರಣ್ಯ ಇಲಾಖೆಯ ನಿಯಮಗಳನುಸಾರ ಆನೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದದ್ದರಿಂದ ಮರಳಿ ಕಾಡಿಗೆ ಬಿಟ್ಟಿದ್ದು, ಒಂದೆರಡು ದಿನದಲ್ಲಿ ಮತ್ತೆ ಆನೆ ಸೆರೆಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಉಪ ಸಂರಕ್ಷಾಣಾಧಿಕಾರಿ ರಾಮಕೃಷ್ಣಪ್ಪ ಹಾಗೂ ಚನ್ನಪಟ್ಟಣ ವಲಯ ಆರಣ್ಯಾಧಿಕಾರಿ ಮಲ್ಲೇಶ್ ನೇತೃತ್ವದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮಾವುತರು, ಕಾವಾಡಿಗರು, ವೈದ್ಯರು, ಶೂಟರ್‌ಗಳು, ಇಲಾಖೆ ಸಿಬ್ಬಂದಿ ಸೇರಿದಂತೆ ೮೦ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.


ಕೋಟ್....................

5 ಆನೆಗಳನ್ನು ಹಿಡಿದು ಸ್ಥಳಾಂತರಿಸಲು ಅನುಮತಿ ಕೋರಿದ್ದೆವು. ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಎಷ್ಟು ಕಿಮಿ ವ್ಯಾಪ್ತಿಯಲ್ಲಿ ಬ್ಯಾರೀಕೇಡ್ ನಿರ್ಮಿಸಬೇಕು, ಎಷ್ಟು ಅನುದಾನ ಬೇಕೆಂದು ಮಾಹಿತಿ ನೀಡಿದ್ದೇವೆ. ಬ್ಯಾರಿಕೇಡ್ ನಿರ್ಮಾಣದ ಜತೆ ಪುಂಡಾನೆಗಳ ಸ್ಥಳಾಂತರಕ್ಕೂ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಆನೆ ಹಾವಳಿಗೆ ಶಾಶ್ವತ ಪರಿಹಾರ ಕೈಗೊಳ್ಳಲಾಗುವುದು.

-ರಾಮಕೃಷ್ಣಪ್ಪ, ಡಿಎಫ್‌ಒ

ಕೋಟ್..................

ತಾಲೂಕಿನ ಚಿಕ್ಕಮಣ್ಣುಗುಡ್ಡೆ ಬಳಿ ೩೫ ವರ್ಷದ ಗಂಡಾನೆ ಸೆರೆಹಿಡಿದಿದ್ದು, ಆನೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡ ಬಂದ್ದರಿಂದ ಆನೆಯನ್ನು ಮತ್ತೆ ಅರಣ್ಯಕ್ಕೆ ಬಿಡಲಾಗಿದೆ. ಒಂದರೆಡು ದಿನ ಬಿಟ್ಟು ಮತ್ತೆ ಆನೆ ಸೆರೆಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗುವುದು.

-ಮಲ್ಲೇಶ್, ಆರ್‌ಎಫ್‌ಒ, ಚನ್ನಪಟ್ಟಣ

ಬಾಕ್ಸ್‌..............

ಕಾಡಾನೆ ಕಾಟಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ: ಸಿಪಿವೈ

ಕಳೆದ ೨೦ ವರ್ಷಗಳಿಂದ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಆನೆಗಳ ಉಪಟಳದಿಂದ ರೈತರು ಬಸವಳಿದಿದ್ದಾರೆ. ಉಪದ್ರವಕಾರಿ 2 ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ ಎಂದು ಶಾಸಕ ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಕೆಂಗಲ್ ಬಳಿ ಇರುವ ಟ್ರೀ ಪಾರ್ಕನಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚನ್ನಪಟ್ಟಣ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಿದ್ದು, ಹತ್ತಾರು ರೈತರು ಸಾವನ್ನಪ್ಪಿದ್ದಾರೆ. ಕಾಡಿಂಚಿನ ಭಾಗದಲ್ಲಿ ಟ್ರಂಚ್ ಅಳವಡಿಕೆ, ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಸುಮಾರು ೧೦ ಆನೆಗಳ ಉಪಟಳ ಹೆಚ್ಚಾಗಿದೆ. ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು, ಅವರಿಗೆ ಆನೆ ಹಾವಳಿಯ ತೀವ್ರತೆ ಗೊತ್ತಿದ್ದು, ಆನೆ ದಾಳಿಗೆ ಶಾಶ್ವತ ಪರಿಹಾರ ಶೀಘ್ರದಲ್ಲೇ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಪೊಟೋ೨೫ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಬಳಿ ಸೆರೆ ಹಿಡಿದಿದ್ದ ಪುಂಡಾನೆ.

ಪೊಟೋ೨೫ಸಿಪಿಟಿ೨:

ಚನ್ನಪಟ್ಟಣ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಬಳಿ ಸೆರೆಸಿಕ್ಕ ಪುಂಡಾನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸೆಣಬಿನ ಹಗ್ಗ ಬಿಗಿದಿರುವುದು.

ಪೊಟೋ೨೫ಸಿಪಿಟಿ೩:

ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿಯ ಟ್ರೀ ಪಾರ್ಕ್‌ನಲ್ಲಿ ಪಳಗಿದ ಆನೆಗಳಿಗೆ ಶಾಸಕ ಯೋಗೇಶ್ವರ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು.