ಸಾರಾಂಶ
ಕನ್ನಡಪ್ರಭ ವಾರ್ತೆ ಕೋಟಪುನಿತ್ ರಾಜ್ಕುಮಾರ್ ಓರ್ವ ಚಿತ್ರನಟ ಎಂಬುವುದಕ್ಕಿಂತಲೂ ಮಾನವೀಯತೆ ವಿಶಿಷ್ಟ ವ್ಯಕ್ತಿತ್ವ ಹೊಂದಿದ ಅಸಾಮಾನ್ಯ ಸಾಧಕ ಎಂದು ಕೋಟದ ಉದ್ಯಮಿ ಕೆ. ರಮೇಶ್ ಪ್ರಭು ನುಡಿದರು.ಅವರು ಭಾನುವಾರ ಕೋಟದ ಪಂಚವರ್ಣ ಕಚೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ಸಹಯೋಗದೊಂದಿಗೆ ಪುನಿತ್ ರಾಜ್ ಕುಮಾರ್ ಜನುಮ ದಿನೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನಗೈದು ಗೌರವ ಸಲ್ಲಿಸಿದರು.ನಂತರ ಮಾತನಾಡಿದ ಅವರು ಕನ್ನಡ ಚಿತ್ರರಂಗದಲ್ಲಿ ಬಿಡುವಿಲ್ಲದಂತೆ ಸಕ್ರಿಯರಾಗಿದ್ದುಕೊಂಡೇ ತೆರೆಯ ಮರೆಯಲ್ಲಿ ಸಾಮಾಜಿಕ ಕಾರ್ಯ ನಿರ್ವಹಿಸಿದ ಅವರ ಪ್ರಾಮಾಣಿಕ ಸೇವೆ ಸಮಾಜದ ಎಲ್ಲರಿಗೂ ಮಾದರಿಯಾದುದು ಎಂದು ಪ್ರಶಂಸಿದರು.ಪುನಿತ್ ರಾಜ್ ಕುಮಾರ್ ವ್ಯಕ್ತಿತ್ವವನ್ನೇ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಚಿಂತನಾಶೀಲರಾಗಿ ಬೆಳೆಯಿರಿ ಎಂದ ಅವರು ಪುನಿತ್ ರಾಜ್ ಕುಮಾರ್ ಹೆಸರಿನಲ್ಲಿ ಪಂಚವರ್ಣ ಸಂಸ್ಥೆ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದ ಕಾರ್ಯ ನಿಜಕ್ಕೂ ಶ್ಲಾಘನೀಯ. ಇನ್ನಷ್ಟು ಕಾರ್ಯಕ್ರಮಗಳು ಪುನಿತ್ ಹೆಸರಿನೊಂದಿಗೆ ರಾರಾಜಿಸಲಿ ಎಂದು ಹಾರೈಸಿದರು.
ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಪುನಿತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಸಂಯುಕ್ತ ಸಂಘಗಳ ಒಕ್ಕೂಟದ ಸಂಚಾಲಕ ಸತ್ಯನಾರಾಯಣ ಆಚಾರ್ಯ, ಪಂಚವರ್ಣದ ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್ಯ, ಸಾಮಾಜಿಕ ಜಾಲತಾಣ ನಿರ್ವಾಹಕ ಕಾರ್ತಿಕ ಎನ್., ಹಿರಿಯ ಸದಸ್ಯ ಕೃಷ್ಣ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ನಿರ್ವಹಿಸಿದರು.