ಅರಸೀಕೆರೆ ತಾಲೂಕಲ್ಲಿ ಹೆಚ್ಚು ಶುದ್ಧ ಕುಡಿಯುವ ನೀರು ಘಟಕ

| Published : Jun 13 2025, 07:14 AM IST

ಸಾರಾಂಶ

ಮನುಷ್ಯನಿಗೆ ಬಹಳ ಮುಖ್ಯವಾದದ್ದು ಆರೋಗ್ಯ. ಅದಕ್ಕೆ ಶುದ್ಧ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಸುರೇಶ್ ಮೊಲಿ ಹೇಳಿದರು. ಧರ್ಮಸ್ಥಳ ಕ್ಷೇತ್ರ ನಿರ್ವಹಣೆ ಮಾಡುತ್ತಿರುವ ಈ ಘಟಕಗಳು ನೈರ್ಮಲ್ಯದಿಂದ ಇರುವಂತೆ ಗಮನ ಕೊಡಿ ಪ್ರಾಮಾಣಿಕ ಸೇವೆಯಿಂದ ನೀವು ಬೆಳೆಯಲು ಸಾಧ್ಯವಾಗುತ್ತದೆ ನಾನು ಸಹ ಒಬ್ಬ ಪ್ರೇರಕನಾಗಿದ್ದೆ 30 ವರ್ಷಗಳ ಹಿಂದೆ, ಇಂದು ನಿರ್ದೇಶಕನಾಗಿದ್ದೇನೆ ನಮ್ಮ ಕರ್ತವ್ಯ ನಿಷ್ಠೆ ನಮ್ಮನ್ನು ಬೆಳೆಸುತ್ತದೆ ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮನುಷ್ಯನಿಗೆ ಬಹಳ ಮುಖ್ಯವಾದದ್ದು ಆರೋಗ್ಯ. ಅದಕ್ಕೆ ಶುದ್ಧ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಸುರೇಶ್ ಮೊಲಿ ಹೇಳಿದರು.

ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರ ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣಾ ಪ್ರೇರಕರ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಶ್ರೀ ಕ್ಷೇತ್ರ ಜಿಲ್ಲೆಯಲ್ಲಿ 49 ಶುದ್ದ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಿದ್ದು 40 ಘಟಕಗಳು ಅರಸೀಕೆರೆ ತಾಲೂಕಿನಲ್ಲಿಯೇ ಇವೆ.

ಧರ್ಮಸ್ಥಳ ಶ್ರೀ ಕ್ಷೇತ್ರವು ಶುದ್ಧ ಕುಡಿಯುವ ನೀರು ಘಟಕ ಪ್ರಾರಂಭಿಸಿದಾಗ ಮೊಟ್ಟ ಮೊದಲಿಗೆ ಕಡೂರಿನಲ್ಲಿ ಸ್ಥಾಪಿಸಲಾಯಿತು ಎಂದು ಹಿಂದಿನದನ್ನು ನೆನಪಿಸಿದರು. ರಾಜ್ಯದಲ್ಲಿ 530 ಘಟಕಗಳನ್ನು ಸ್ಥಾಪಿಸಲಾಗಿದ್ದು ಇನ್ನೂ 150 ಘಟಕಗಳು ಪ್ರಾರಂಭವಾಗಲಿದೆ ಶುದ್ಧ ನೀರು ಘಟಕದ ಸುತ್ತ ಪರಿಸರವನ್ನ ಕಾಪಾಡಿಕೊಳ್ಳುವಲ್ಲಿ ಘಟಕ ಪ್ರೇರಕರು ವಿಶೇಷ ಕಾಳಜಿ ವಹಿಸಬೇಕು, ನಿರ್ವಹಣೆಯಲ್ಲಿ ಶ್ರದ್ಧೆ ಇರಲಿ ನಿಗದಿತ ಸಮಯದಲ್ಲಿ ನೀವು ಕರ್ತವ್ಯ ನಿರ್ವಹಿಸಬೇಕು ಕೆಲಸಕ್ಕೆ ಹೋಗುವವರು ಬೆಳಗ್ಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲು ಬರುತ್ತಾರೆ ಆ ಸಮಯದಲ್ಲಿ ನೀವು ತೆರೆದಿರಬೇಕು, ಧರ್ಮಸ್ಥಳ ಕ್ಷೇತ್ರ ನಿರ್ವಹಣೆ ಮಾಡುತ್ತಿರುವ ಈ ಘಟಕಗಳು ನೈರ್ಮಲ್ಯದಿಂದ ಇರುವಂತೆ ಗಮನ ಕೊಡಿ ಪ್ರಾಮಾಣಿಕ ಸೇವೆಯಿಂದ ನೀವು ಬೆಳೆಯಲು ಸಾಧ್ಯವಾಗುತ್ತದೆ ನಾನು ಸಹ ಒಬ್ಬ ಪ್ರೇರಕನಾಗಿದ್ದೆ 30 ವರ್ಷಗಳ ಹಿಂದೆ, ಇಂದು ನಿರ್ದೇಶಕನಾಗಿದ್ದೇನೆ ನಮ್ಮ ಕರ್ತವ್ಯ ನಿಷ್ಠೆ ನಮ್ಮನ್ನು ಬೆಳೆಸುತ್ತದೆ ಎಂದು ಕಿವಿಮಾತು ಹೇಳಿದರು. ಶುದ್ಧಗಂಗಾ ಕೇಂದ್ರ ಕಚೇರಿಯ ನಿರ್ದೇಶಕ ಧರ್ಮಸ್ಥಳದ ಪದ್ಮನಾಭ ಮಾತನಾಡಿ, ಶ್ರೀ ಕ್ಷೇತ್ರವು ಜನರ ಸೌಖ್ಯಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.

ಜಿಲ್ಲಾ ಜನಜಾಗೃತಿ ಸದಸ್ಯ ಎಚ್. ಡಿ. ಸೀತಾರಾಂ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಯಶಸ್ವಿಯಾಗಿ ಇದು ಫಲಾನುಭವಿಗಳಿಗೆ ತಲುಪುತ್ತಿದೆ, ಶಿಸ್ತುಬದ್ಧವಾಗಿ ಅನುಷ್ಠಾನ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅರಸೀಕೆರೆ ಯೋಜನಾಧಿಕಾರಿ ಅಕ್ಷತಾ ರೈ ಮತ್ತು ಬಾಣಾವರ ಯೋಜನಾಧಿಕಾರಿ ಸೋಮನಾಥ್, ಶುದ್ಧ ಕುಡಿಯುವ ನೀರು ಘಟಕದ ತಾಂತ್ರಿಕ ತಜ್ಞ ಲೋಕೇಶ್ ದಯಾನಂದ್ ಉಪಸ್ಥಿತರಿದ್ದರು.