ಸಾರಾಂಶ
ಜೈನ ಧರ್ಮದಲ್ಲಿ ನವಕಾರ ಮಂತ್ರ ಅತೀ ಮಹತ್ವದ ಹಾಗೂ ಪ್ರಾವಿತ್ಯತೆ ಹೊಂದಿದ ಮಂತ್ರವಾಗಿದೆ. ಈ ಮಂತ್ರ ಪಠಣದಿಂದ ಆತ್ಮಶುದ್ಧಿಗೆ ಸಹಕಾರಿಯಾಗಲಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಇಡೀ ವಿಶ್ವಕ್ಕೆ ಮತ್ತು ಸಕಲ ಜೀವಾತ್ಮಗಳಿಗೆ ಪರಿಶುದ್ಧ ಜೀವನ ಶೈಲಿ ನೀಡುವ ಹಾಗೂ ವಿಶ್ವ ಶಾಂತಿಯ ಮಹಾಮಂತ್ರವಾಗಿರುವ ನವಕಾರ ಮಂತ್ರ ಇದೊಂದು ಅಧ್ಯಾತ್ಮದ ಮಂತ್ರವಾಗಿದೆ. ಇಂದು ನಡೆಯುತ್ತಿರುವ ವಿಶ್ವ ನವಕಾರ ದಿವಸ ಆಚರಣೆ ವೇಳೆ ನಾವೆಲ್ಲರೂ ನವ (ಒಂಭತ್ತು) ಸಂಕಲ್ಪ ಮಾಡಬೇಕಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.ಜೈನ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಝೇಶನ (ಜಿತೊ) ಬೆಳಗಾವಿ ವಿಭಾಗದಿಂದ ನಗರದ ಮಹಾವೀರ ಭವನದ ಬಳಿ ಬುಧವಾರ ಆಯೋಜಿಸಿದ್ದ ಹಾಗೂ ದೇಶದ ವಿವಿಧ 6000 ನಗರ, ಪಟ್ಟಣಗಳಲ್ಲಿ ಮತ್ತು 108 ವಿವಿಧ ದೇಶಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ನವಕಾರ ದಿವಸ ಸಮಾರಂಭವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಧರ್ಮದಲ್ಲಿ ನವಕಾರ ಮಂತ್ರ ಅತೀ ಮಹತ್ವದ ಹಾಗೂ ಪ್ರಾವಿತ್ಯತೆ ಹೊಂದಿದ ಮಂತ್ರವಾಗಿದೆ. ಈ ಮಂತ್ರ ಪಠಣದಿಂದ ಆತ್ಮಶುದ್ಧಿಗೆ ಸಹಕಾರಿಯಾಗಲಿದೆ. ರಾಗ, ದ್ವೇಷ, ಮೋಹ ಎಲ್ಲವನ್ನು ತ್ಯಜಿಸಿ ತಮ್ಮ ಆತ್ಮ ಕಲ್ಯಾಣ ಮಾಡಿಕೊಳ್ಳಲು ಈ ಮಂತ್ರದ ಪಠಣ ಸಹಕಾರಿಯಾಗಲಿದೆ. ಇಂತಹ ಅದ್ಭುತ ಮಂತ್ರ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಮೋದಿ ಹೇಳಿದರು.ಸಾನ್ನಿಧ್ಯ ವಹಿಸಿದ್ದ ಅನೇಕಾಂತ ಸಾಗರಜೀ ಮಹಾರಾಜ ಮಾತನಾಡಿ, ನವಕಾರ ಮಂತ್ರ ಪಠಣ ಇಡಿ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆ, ಸತ್ಯದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಮಂತ್ರವಾಗಿದೆ. ಇದೊಂದು ಆಧ್ಯಾತ್ಮಿಕವಾದ ಹಾಗೂ ಎಲ್ಲ ಮಾನವ ಕುಲಕ್ಕೆ ಅವಶ್ಯಕವಾಗಿರುವ ಮಂತ್ರವಾಗಿದೆ. ಈ ಮಂತ್ರವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಹಾವೀರ ಭವನದ ಬಳಿ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸುಮಾರು ಏಳು ಸಾವಿರ ಜನರು ಸೇರಿ ಏಕಕಾಲಕ್ಕೆ ನವಕಾರ ಮಂತ್ರ ಪಠಣ ಮಾಡಿದರು. ಅದಲ್ಲದೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಎಲ್ಲ ಬಸದಿಗಳಲ್ಲಿ ಶ್ರಾವಕ ಶ್ರಾವಕಿಯರು ಏಕಕಾಲಕ್ಕೆ ನವಕಾರ ಮಂತ್ರ ಪಠಣ ಮಾಡಿದರು. ವಿಶ್ವದಾದ್ಯಂತ ನಡೆದ ಈ ಕಾರ್ಯಕ್ರಮದಲ್ಲಿ ಜಿತೋ ಬೆಳಗಾವಿಯಿಂದ ಅತೀ ಹೆಚ್ಚು 1,23,352 ಜನರು ಹೆಸರು ನೋಂದಣಿ ಮಾಡುವ ಮೂಲಕ ಜಿತೋ ಬೆಳಗಾವಿ ವಿಭಾಗ ದಾಖಲೆ ನಿರ್ಮಿಸಿತು.ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಭಯ ಆದಿಮನಿ ವಂದಿಸಿದರು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ , ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಶ್ರೀಪಾಲ ಖೇಮಲಾಪುರೆ ಸೇರಿದಂತೆ ಸಮಾಜದ ಹಿರಿಯರು ಉಪಸ್ಥಿತರಿದ್ದರು.ಪ್ರಧಾನಿ ಮೋದಿ ನವ ಸಂಕಲ್ಪ1ನೀರು ಮಿತ ಬಳಕೆ
2ಪರಿಸರ ಕಾಳಜಿ ಜೊತೆಗೆ ಪ್ರತಿಯೊಬ್ಬರು ತಮ್ಮ ತಾಯಿ ನೆನಪಿನಲ್ಲಿ ಒಂದು ಸಸಿ ನೆಡುವುದು3ಸ್ವಚ್ಛತೆ
4ವೋಕಲ್ ಟೂ ಲೋಕಲ್ ವ್ಯಾಪಾರ5ದೇಶ ದರ್ಶನ
6ಸಾವಯವ ಕೃಷಿ ಮಾಡುವುದು7ಭಾರತೀಯ ಶುದ್ಧ ಆಹಾರ
8ಯೋಗ ಮತ್ತು ದೇಶಿಯ ಆಟೋಪಾಠಗಳು9ಬಡವರಿಗೆ ಸಹಾಯ ಮಾಡುವ ಸಂಕಲ್ಪ
ಈ ರೀತಿಯ ನವ ಸಂಕಲ್ಪಗಳನ್ನು ವಿಶ್ವ ನವಕಾರ ದಿವಸ ಆಚರಣೆ ಅಂಗವಾಗಿ ನಾವೆಲ್ಲರೂ ಇಂದು ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.