ಅಕ್ರಮ ಮರಳು, ಮಟ್ಕಾ ದಂಧೆಗಳಿಗೆ ಶೀಘ್ರ ಕಡಿವಾಣ ಹಾಕಿ

| Published : Jul 07 2024, 01:16 AM IST

ಸಾರಾಂಶ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ, ಮದ್ಯ, ಮಟ್ಕಾ ಇಸ್ಪೀಟ್‌ ದಂಧೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ, ಮದ್ಯ, ಮಟ್ಕಾ ಇಸ್ಪೀಟ್‌ ದಂಧೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನೆ ವತಿಯಿಂದ ಮುಖಕ್ಕೆ ಮಾಸ್ಕ್ ಧರಿಸಿ, ಮರಳು ಕಮಿಟಿ ಸಭೆ ವರದಿ ಪ್ರಕಟವಾದ ವಿವಿಧ ಪತ್ರಿಕೆಗಳ ವರದಿಗಳ ಜೆರಾಕ್ಸ್ ಪ್ರತಿಗಳನ್ನು ಹಿಡಿದು, ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಮೌನ ಪ್ರತಿಭಟನೆ ನಡೆಸಲಾಯಿತು.

ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿ, ಕಳೆದ ಮೇ 29 ರಂದು ಜಿಲ್ಲಾಮಟ್ಟದ ಮರಳು ಮಾನಿಟರಿಂಗ್ ಕಮಿಟಿ ಸಭೆ ನಡೆಸಿದ ಜಿಲ್ಲಾಧಿಕಾರಿ ಅವರು, ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಅವರ ಆದೇಶ ಕೇವಲ ಪತ್ರಿಕೆಗಳಲ್ಲಿ ಬಂದ ವರದಿಗೆ ಮಾತ್ರ ಸೀಮಿತವಾಗಿದೆ. ಅಕ್ರಮ ಮರಳು, ಮದ್ಯ, ಮಟ್ಕಾ, ಇಸ್ಪೀಟ್ ದಂಧೆಗಳು ವಡಗೇರಾ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಡಗೇರಾ ತಾಲೂಕಿನ ಗೊಂದೆನೂರು, ಕುಮನೂರ, ಕೊಂಕಲ್, ಚೆನ್ನೂರ, ಹಯ್ಯಾಳ, ಐಕೂರು ಸೇರಿದಂತೆ ವಿವಿಧೆಡೆ ಈ ಅಕ್ರಮಗಳು ನಡೆಯುತ್ತಲೇ ಇವೆ. ಇದರಿಂದಾಗಿ ನಗರ, ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ಗ್ರಾಮಗಳಲ್ಲಿ ಜನತೆ ಅಕ್ರಮ ಮದ್ಯ, ಇಸ್ಪೀಟ್ ಮಟ್ಕಾದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಕರು ಸಾವುನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಪೊಲೀಸ್ ವರಿಷ್ಠಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ವಡಗೇರಾ ಪಿಎಸ್ಐ ನಿರ್ಲಕ್ಷ್ಯ ಹಾಗೂ ಕುಮ್ಮಕ್ಕು ಎಂದರು.

ಪೊಲೀಸರಿಂದಲೇ ಸಹಕಾರ:

ಈ ಹಿಂದೆ ಹೊಳೆ ದಂಡೆಗೆ ಅಕ್ರಮ ತಡೆಯಲು ಡಿಎಆರ್ ವ್ಯಾನ್ ಗಸ್ತು ತಿರುಗುತ್ತಿತ್ತು ಮತ್ತು ಅಲ್ಲೇ ಬೀಡುಬಿಟ್ಟಿತ್ತು. ಇತ್ತೀಚಿಗೆ ಡಿಎಆರ್ ವ್ಯಾನ್ ಅನ್ನು ರದ್ದು ಮಾಡಲಾಗಿದೆ. ಭೀಮಾ ಮತ್ತು ಕೃಷ್ಣಾ ನದಿಯೊಳಗೆ ಮರಳು ಸಾಗಣೆ ಮಾಡಲು ರಸ್ತೆ ಮಾಡಿಕೊಂಡಿದ್ದಾರೆ. ಇದು ಭಾರೀ ಅಕ್ರಮವಾಗಿದ್ದು, ಇಂತಹ ಹಗಲು ದರೋಡೆಗೆ ಪೊಲೀಸರೆ ಸ್ಕೇಚ್ ಹಾಕಿ ಸಹಕಾರ ನೀಡುತ್ತಿರುವಂತಹ ಸಂಗತಿ ಯಾದಗಿರಿ, ವಡಗೇರಾದಲ್ಲಿ ಮಾತ್ರ ನಡೆಯುತ್ತಿದೆ ಎಂದು ದೂರಿದರು.

ನದಿಯಂಗಳದಲ್ಲಿ ಸುಮಾರು ಅರ್ಧ ಕಿ.ಮೀ.ನಷ್ಟು ರಸ್ತೆಯೊಳಗೆ ಭಾರೀ ಗಾತ್ರದ ವಾಹನಗಳು, ಜೆಸಿಬಿ ಹಿಟಾಚಿ ಯಂತ್ರಗಳು ಸಂಚರಿಸುತ್ತಿವೆ. ನದಿಯ ಒಡಲು ಬಗೆದು ಮರಳು ತಂದು, ದಂಡೆಗೆ ಹಾಕುತ್ತಿದ್ದಾರೆ. ನಂತರ ಅಲ್ಲಿಂದ ಮತ್ತೆ ಲಾರಿಗಳಿಗೆ ಏರಿಸಿ ಸಾಗಿಸುತ್ತಿದ್ದಾರೆ. ಶಬ್ದ ಮಾಲಿನ್ಯದಿಂದ ರಾತ್ರಿ ನೆಮ್ಮದಿಯಿಂದ ಮಲಗಲು ಆಗುತ್ತಿಲ್ಲ. ಹಗಲು-ರಾತ್ರಿ ಧೂಳಿನಿಂದಾಗಿ ಪರಿಸರ ಕಲುಷಿತವಾಗುತ್ತಿದೆ. ರಸ್ತೆಗಳು ಹಾಳಾಗುತ್ತಿವೆ. ನಾಯಿ ಮುಂತಾದ ಪ್ರಾಣಿಗಳು ಸಾವಿಗೀಡಾಗುತ್ತಿವೆ. ಜಿಲ್ಲೆಯ ಎಸ್‌ಪಿ ಅವರಿಗೆ ಇಂಥದ್ದೆಲ್ಲ ಮಾಹಿತಿ ಇರಬೇಕು. ಇಂತಹ ಸ್ಥಳಗಳಿಗೆ ಭೇಟಿ ಕೊಟ್ಟು ಮಾಹಿತಿ ಏಕೆ ಪಡೆಯುತ್ತಿಲ್ಲ ಎಂಬುದು ಜನತೆ ಪ್ರಶ್ನೆಯಾಗಿದೆ ಎಂದರು.

ಮೊಹ್ಮದ್ ರಫಿ ವೀರಣ್ಣಗೌಡ, ರಂಗಪ್ಪ, ತಿಪ್ಪಣ್ಣ, ಶರಣು, ಅಯ್ಯಣ್ಣ, ಸಿದ್ದಪ್ಪ, ಶರಣಪ್ಪ, ಹುಲಿಗೆಪ್ಪ, ಹಣಮಂತ, ಸಾಬಣ್ಣ, ಶರಣಬಸವ, ಭೀಮರಡ್ಡಿ, ದೇವಪ್ಪ, ಗೋವಿಂದ, ನಾಗಪ್ಪ, ಭೀಮಾಶಂಕರ, ರವಿ, ಪರಶುರಾಮ, ಅಯ್ಯಣ್ಣ, ನಿಂಗಪ್ಪ ಬಾಗ್ಲಿ ವೆಂಕಟೇಶ, ತಿಮ್ಮನ್ಣ ದೇವಪ್ಪ ಅಯ್ಯಮ್ಮ , ಮರೆಮ್ಮ ಸೇರಿ ಅನೇಕರು ಇದ್ದರು.

ಸ್ಪಂದಿಸದಿದ್ದರೆ ಉಗ್ರ ಹೋರಾಟ:

ಅಕ್ರಮ ಮರಳು ಸಾಗಣೆ ಮಾಡುವವರು ಧೈರ್ಯವಾಗಿ ಹೇಳುತ್ತಾ, ನಾವು ಎಲ್ಲರಿಗೂ ಮಾಮೂಲು ಕೊಟ್ಟಿದ್ದೇವೆ. ಮೇಲಿನವರೆಗೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗೆ ಸಾಗಿದರೆ ಜಿಲ್ಲೆಯಲ್ಲಿ ಅಕ್ರಮಗಳ ದರ್ಬಾರ್ ನಡೆದು ಹಿಂದೆ ಉತ್ತರಪ್ರದೇಶ, ಬಿಹಾರನಂತೆ ಆಗುವಲ್ಲಿ ಸಂಶಯವಿಲ್ಲ. ಕೂಡಲೇ ನದಿಯಲ್ಲಿ ಅಕ್ರಮ ರಸ್ತೆ ತೆರವು ಮಾಡಬೇಕು. ಸ್ಥಳದಲ್ಲಿ ಡಿಎಆರ್ ವಾಹನ ಗಸ್ತು ಪುನಃ ಆರಂಭಿಸಬೇಕು. ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಉಮೇಶ ಕೆ. ಮುದ್ನಾಳ ಎಚ್ಚರಿಸಿದರು.