ಶಾಸಕ ಮಂಜುನಾಥ್ ಭಾಗಿ । 12 ತಿಂಗಳಿನಲ್ಲಿ ಕಾಮಗಾರಿ ಪೂರ್ಣ । ಸ್ಥಳೀಯ ಸಂಪರ್ಕ ವೃದ್ಧಿ
ಕನ್ನಡಪ್ರಭ ವಾರ್ತೆ ಹನೂರುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗದಿಂದ ಹನೂರು ನೂತನ ಬಸ್ ಡಿಪೋ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ಹನೂರಿನಲ್ಲಿ 4 ಎಕರೆ 50 ಸೆಂಟ್ಸ್ ವಿಸ್ತೀರ್ಣದಲ್ಲಿ 7.52 ಲಕ್ಷ ರು. ವೆಚ್ಚದಲ್ಲಿ ಆಧುನಿಕ ಬಸ್ ಡಿಪೋ ನಿರ್ಮಾಣವಾಗಲಿದೆ ಎಂದು ತಿಳಿಸಿದರು.1682 ಚದರ ಮೀಟರ್ ವಿಸ್ತೀರ್ಣದ ಮುಖ್ಯ ಕಟ್ಟಡದಲ್ಲಿ ನೆಲ ಮತ್ತು ಮೊದಲ ಅಂತಸ್ತು ಇರಲಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಸಿಬ್ಬಂದಿ ವಿಶ್ರಾಂತಿ ಕೊಠಡಿ, ತಾಂತ್ರಿಕ ಸಿಬ್ಬಂದಿ ಕೊಠಡಿ, ಸಂಚಾರ ಶಾಖೆ ಕೊಠಡಿ, ಭದ್ರತಾ ದ್ವಾರ ನಿರ್ಮಿಸಲಾಗುವುದು.
ಅದೇ ರೀತಿ ವಾಹನಗಳ ನಿಲುಗಡೆ ಸ್ಥಳ, ವಾಹನ ದುರಸ್ತಿ ಅಂಗಳ, ಇಂಧನ ತುಂಬಿಸುವ ಟ್ಯಾಂಕ್, ವಾಷಿಂಗ್ ರ್ಯಾಂಪ್, ಸುತ್ತುಗೋಡೆ, ನೀರು ಶುದ್ಧೀಕರಣ ಘಟಕ, ಮಳೆ ನೀರು ಕೊಯ್ಲು ಘಟಕದಂತಹ ಸೌಲಭ್ಯಗಳನ್ನು ಒದಗಿಸಲಾಗುವುದು.
ಮಳೆಗಾಲವನ್ನು ಹೊರತುಪಡಿಸಿ 12 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಹೊಸ ಬಸ್ ನಿಲ್ದಾಣದಿಂದ ಹನೂರು ಮತ್ತು ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹನೂರು ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಶಾಸಕ ಆರ್. ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಓ ಮೋನಾ ರೋತ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.--
7ಸಿಎಚ್ಎನ್17ಹನೂರು ನೂತನ ಬಸ್ ಡಿಪೋ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಶಂಕು ಸ್ಥಾಪನೆ ನೆರವೇರಿಸಿದರು.