ಸಾರಾಂಶ
-ಭೂಹಳ್ಳಿ ಪುಟ್ಟಸ್ವಾಮಿಗೆ ನುಡಿನಮನ ಕಾರ್ಯಕ್ರಮದಲ್ಲಿ ವಿಷಾದಕನ್ನಡಪ್ರಭವಾರ್ತೆ ಚನ್ನಪಟ್ಟಣ
ಭೂಹಳ್ಳಿ ಪುಟ್ಟಸ್ವಾಮಿ ಅವರು ಪರಿಸರ ಸಂರಕ್ಷಣೆಗಾಗಿ ತನ್ನ ಇಡೀ ಬದುಕನ್ನು ಅರ್ಪಿಸಿಕೊಂಡಿದ್ದರು. ಅವರ ನಿಧನದಿಂದ ಪರಿಸರ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಚನ್ನಾಂಬಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮಾ ನಿಂಗೇಗೌಡ ವಿಷಾದಿಸಿದರು.ಪಟ್ಟಣದ ಚನ್ನಾಂಬಿಕ ಪದವಿ ಕಾಲೇಜು ಆವರಣದಲ್ಲಿ, ನಿಸರ್ಗ ಟ್ರಸ್ಟ್ ಅಂಕನಹಳ್ಳಿ ಹಮ್ಮಿಕೊಂಡಿದ್ದ ಪರಿಸರವಾದಿ ಹಾಗೂ ಹಿರಿಯ ಕವಿ ಭೂಹಳ್ಳಿ ಪುಟ್ಟಸ್ವಾಮಿ ಅವರ ಜೀವನ ಸಾಧನೆ ಕುರಿತು ಉಪನ್ಯಾಸ ಹಾಗೂ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಬಗೆಗೆ ಅವರಿಗಿದ್ದ ಕಾಳಜಿ ಅನುಕರಣೀಯ ಎಂದರು.
ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಬಡ ಕುಟುಂಬದ ಹಿನ್ನೆಲೆಯಲ್ಲಿ ಬಂದ ಭೂಹಳ್ಳಿ ಅವರು, ಪರಿಸರ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪಾಳುಭೂಮಿಯನ್ನು ಪಾವನಗೊಳಿಸುವ ಕೈಂಕರ್ಯ ತೊಟ್ಟವರು. ಸಮಾಜದ ನಿಂದನೆಗಳಿಗೆ ತಲೆಕೊಡದೇ, ಸ್ವಯಂ ಸೇವಕನಾಗಿ ದುಡಿದು ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದರು ಎಂದು ಸ್ಮರಿಸಿದರು.೧೫ಕ್ಕೂ ಹೆಚ್ಚು ಕೃತಿಗಳನ್ನು ಲೋಕಾರ್ಪಣೆ ಗೊಳಿಸುವ ಮೂಲಕ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದರು. ಕೇವಲ ಬೋಧನೆಗೆ ಸೀಮಿತಗೊಳ್ಳದೆ, ಸ್ವತಃ ಕಾರ್ಯರೂಪಕ್ಕಿಳಿದು ಪರಿಸರ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಕಳೆದ ೨೫ ವರ್ಷಗಳಿಂದ ಪರಿಸರ ಸಂರಕ್ಷಣೆಯನ್ನು ತನ್ನ ಉಸಿರಾಗಿಸಿಕೊಂಡು ೧೨ಕ್ಕೂ ಹೆಚ್ಚು ವನಗಳ ನಿರ್ಮಾಣ ಮಾಡಿದ್ದಾರೆ. ಅದಕ್ಕಾಗಿ, ತನ್ನ ತನು ಮನ ಧನಗಳನ್ನು ಅರ್ಪಿಸಿಕೊಂಡು ಅಜರಾಮರರಾಗಿ ಉಳಿದಿದ್ದಾರೆ. ಯುವ ಸಮುದಾಯ ಅವರ ಆಶಯಗಳನ್ನು ಮುಂದುವರಿಸುವ ದೀಕ್ಷೆ ತೊಡಬೇಕು ಎಂದು ಹೇಳಿದರು.
ಪ್ರಾಂಶುಪಾಲ ಮೋಹನ್ ಚಕ್ರವರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಐಶ್ವರ್ಯ, ಶೋಭಿತ ಹಾಗೂ ಮಂಜುನಾಥ್ ಹಾಜರಿದ್ದರು.
ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ ಪರಿಸರ ಗೀತೆಗಳ ಗಾಯನ ನಡೆಸಿಕೊಟ್ಟರು. ಟ್ರಸ್ಟ್ ಕಾರ್ಯದರ್ಶಿ ಡಾ.ಅಂಕನಹಳ್ಳಿ ಪಾರ್ಥ ಪ್ರಾಸ್ತಾವಿಕ ನುಡಿಯಾಡಿದರು.