ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ಮಸೂದೆ ೨೦೨೫, ಗೋಹತ್ಯಾ ನಿಷೇಧ ಕಾನೂನು ಸಡಿಲಗೊಳಿಸುವ ಮಸೂದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿ ಆಗ್ರಹಿಸಿದ್ದಾರೆ.

ಪುತ್ತೂರು: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ಮಸೂದೆ ೨೦೨೫, ಗೋಹತ್ಯಾ ನಿಷೇಧ ಕಾನೂನು ಸಡಿಲಗೊಳಿಸುವ ಮಸೂದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿ ಆಗ್ರಹಿಸಿದ್ದಾರೆ. ಈ ಮಸೂದೆ ಜಾರಿಗೊಳಿಸಲು ಮುಂದಾಗುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಹಿಂದೂ ವಿರೋಧಿ ಅನ್ನುವುದನ್ನು ಸಾಬೀತುಪಡಿಸಿದೆ, ಮುಂದಿನ ಚುನಾವಣೆಯಲ್ಲಿ ಮುಸ್ಲಿಮರ ಮತ ಪಡೆಯುವಂತಹ ಹುನ್ನಾರ ಮತ್ತು ಹಿಂದೂ ಸಂಘಟನೆಗಳನ್ನು ಮತ್ತು ಹಿಂದೂ ನಾಯಕರನ್ನು,ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನದ ಒಂದು ಭಾಗ ಈ ಮಸೂದೆಯಾಗಿವೆ. ಈ ಮಸೂದೆಯನ್ನ ಹಿಂದೂ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು. ರಾಜ್ಯ ಸರ್ಕಾರ ಅಕ್ರಮ ಗೋಸಾಗಾಟ ವಿರುದ್ಧ ಇರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಮತ್ತು ಸಂರಕ್ಷಣಾ ವಿಧೇಯಕ-೨೦೨೦ಕ್ಕೆ ಬದಲಾವಣೆ ತರಲು ಯೋಚಿಸುತ್ತಿದ್ದು ಮತ್ತೆ ಇದರಿಂದ ಗೋ ಹತ್ಯೆ ಮಾಡಲು ಪರೋಕ್ಷವಾಗಿ ಬೆಂಬಲ ನೀಡುವ ತಂತ್ರಗಾರಿಕೆಯೂ ಅಡಗಿದೆ. ಈ ಮೂಲಕ ಇನ್ಮುಂದೆ ರಾಜ್ಯದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಿ, ಸಿಕ್ಕಿಬಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿದೆ, ಪೊಲೀಸರು ವಶಪಡಿಸಿಕೊಂಡ ಅಕ್ರಮ ಗೋಸಾಗಾಟ ನಡೆಸುತ್ತಿದ್ದ ವಾಹನಗಳು ಆರೋಪಿಗಳಿಗೆ ಸುಲಭವಾಗಿ ಮರಳಿ ಸಿಗಲಿದೆ. ಈ ಮೂಲಕ ಮತ್ತೊಮ್ಮೆ ತನ್ನ ಓಲೈಕೆ ರಾಜಕಾರಣದ ಪರಾಕಾಷ್ಠೆಯಿಂದ ಹಿಂದೂ ವಿರೋಧಿ ನೀತಿಯನ್ನು ರಾಜ್ಯ ಸರಕಾರ ಜಗಜ್ಜಾಹೀರು ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಇದರಿಂದ ಸಂಘರ್ಷದ ವಾತಾವರಣ ನಿರ್ಮಾಣ ಆಗುವ ಆತಂಕ ಎದುರಾಗಿದ್ದು ಈ ಮಸೂದೆಯನ್ನು ಹಿಂಪಡೆಯಬೇಕು ಮತ್ತು ಸರ್ಕಾರ ರಾಜಧರ್ಮವನ್ನು ಪಾಲನೆ ಮಾಡಬೇಕೆಂದು ಆಗ್ರಹಿಸಿದರು. ಈ ಮಸೂದೆಗಳು ಸಚಿವ ಸಂಪುಟದಲ್ಲಿ ಅಂಗೀಕಾರವಾದರೂ ಹಿಂದುತ್ವದ ಮತ್ತು ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ರಾಜಕಾರಣಿಗಳು ಮೌನ ವಹಿಸಿರುವುದು ವಿಷಾದನೀಯ ಎಂದು ಅವರು ಖಂಡಿಸಿದ್ದಾರೆ.