ಕನ್ನಡಪ್ರಭವಾರ್ತೆ ಪುತ್ತೂರು

ದೇವಾಲಯ ಎಂಬುದು ಎಲ್ಲರದ್ದಾಗಿದ್ದು, ಇಲ್ಲಿನ ಲೆಕ್ಕಾಚಾರಗಳ ಬಗ್ಗೆ ತಿಳಿಯುವ ಸಮಸ್ಯೆ, ಕೊರತೆಗಳ ಬಗ್ಗೆ ತಿಳಿ ಹೇಳುವ ಮತ್ತು ಸಲಹೆಗಳನ್ನು ನೀಡುವ ಹಕ್ಕು ಮತ್ತು ಜವಾಬ್ದಾರಿ ದೇವಳದ ಭಕ್ತರಿಗೆ ಇದೆ. ಐತಿಹಾಸಿಕ ಪುತ್ತೂರು ಜಾತ್ರೆಯನ್ನು ಯಶಸ್ವಿಯಾಗಿ, ವಿಜೃಂಭಣೆಯಿಂದ ನಡೆಸಲು ಈ ಹಿಂದಿನಂತೆಯೇ ಸಮಸ್ತ ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.

ಏ.೧ ರಂದು ಗೊನೆ ಮುಹೂರ್ತ ನಡೆದು ಏ.೧೦ ರಿಂದ ೨೦ ರ ತನಕ ನಡೆಯುವ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಹಿನ್ನೆಲೆಯಲ್ಲಿ ಮಂಗಳವಾರ ದೇವಾಲಯದ ಸಭಾಂಗಣದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಭಕ್ತರ ಸಲಹೆ, ಅಭಿಪ್ರಾಯಗಳನ್ನು ಪಡೆಯಲಾಯಿತು.ಜಾತ್ರೆಯ ಸಂದರ್ಭದಲ್ಲಿ ಪೂಜೆ ಸ್ವೀಕರಿಸಲ್ಪಡುವ ಕಟ್ಟೆಗಳ ಸ್ವಚ್ಚತೆ ಮತ್ತು ಸುರಕ್ಷತೆಯ ಬಗ್ಗೆ ನಿಗಾ ವಹಿಸಬೇಕು ಎಂಬ ಭಕ್ತರ ಸಲಹೆಗೆ ಉತ್ತರಿಸಿದ ಅಧ್ಯಕ್ಷರು ಈ ಬಗ್ಗೆ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಏ.೧೬ ಹಾಗೂ ೧೭ ರಂದು ಹೆಚ್ಚು ಭಕ್ತರ ಸಂಖ್ಯೆ ಇರುವುದರಿಂದ ಮುಖ್ಯವಾಗಿ ದೂರದಿಂದ ಬರುವ ಭಕ್ತರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆಯನ್ನು ಕನಿಷ್ಠ ೩ ಕಡೆಗಳಲ್ಲಿ ಮಾಡಬೇಕು. ದೇವರ ಪೇಟೆ ಸವಾರಿ ಸಂದರ್ಭದಲ್ಲಿ ಜನ ಹೆಚ್ಚು ಸೇರುವ ಕಾರಣ ಅನಾಹುತಗಳ ಆಗದಂತೆ ಆಂಬುಲೆನ್ಸ್ ಸೇವೆ ಜತೆಗಿರಬೇಕು. ಕಟ್ಟೆಗಳ ಬಳಿಯಲ್ಲಿ ಪಾರ್ಕಿಂಗ್‌ನಿಂದ ಸಮಸ್ಯೆಗಳು ಆಗದಂತೆ ಎಚ್ಚರ ವಹಿಸಬೇಕು. ದೇವರ ಮಹಾರಥ ಹೊರಟು ರಾತ್ರಿ ೧೨ ಗಂಟೆಯೊಳಗೆ ಹಿಂದಿರುಗುವಂತಾಗಬೇಕು. ಹೊರಡುವ ಸಮಯವೂ ಬೇಗ ಆಗಬೇಕು.

ಜಾತ್ರೆಯಲ್ಲಿ ಸಂತೆ ವ್ಯಾಪಾರ ಹಿಂದೂಗಳಿಗೆ ಮಾತ್ರ ಎನ್ನುವ ನಿಯಮ ಪಾಲನೆಯಾಗಬೇಕು. ಜಾತ್ರಾ ಗದ್ದೆ ಪ್ರವೇಶದ ಹೊರಭಾಗದಲ್ಲಿ ಅನ್ಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು. ದೇವರ ವೀರಮಂಗಲ ಜಳಕದ ಸವಾರಿ ಮುಗಿಸಿ ಬರುವಾಗ ಹಿರಿಯರು, ಮಕ್ಕಳಿಗೆ ಅನುಕೂಲವಾಗುವಂತೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಬೇಕು. ಸಮರ್ಪಕ ವ್ಯವಸ್ಥೆಯ ದೃಷ್ಟಿಯಿಂದ ಹೆಚ್ಚಿನ ಸ್ವಯಂ ಸೇವಕರ ನೋಂದಣಿಗೆ ವ್ಯವಸ್ಥೆ ಮಾಡಬೇಕು ಎಂದು ದೇವಳದ ಭಕ್ತರು ಸಲಹೆ ನೀಡಿದರು. ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ಈಶ್ವರ ಬಿಡೇಕರ್, ಮಹಾಬಲ ರೈ ಒಳತ್ತಡ್ಕ, ನಳಿನಿ ಶೆಟ್ಟಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ವ್ಯವಸ್ಥಾಪಕ ಹರೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.