PWD office furniture seized due to contractor owing Rs 1.95 crore

- ರಸ್ತೆ ಅಗಲೀಕರಣ, ಡಾಂಬರೀಕರಣ ಕಾರ್ಯ ಮುಗಿಸಿ 10 ವರ್ಷಗಳಾದರೂ ಬಾರದ ದುಡ್ಡು । ಕೋರ್ಟ್‌ ಆದೇಶದಂತೆ

---

ಕನ್ನಡಪ್ರಭ ವಾರ್ತೆ ಯಾದಗಿರಿ

ಭೂಸ್ವಾಧೀನ ವಿಚಾರದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡದ ಬಗ್ಗೆ ಯಾದಗಿರಿ ನಗರಸಭೆಯ ಆಸ್ತಿ ಜಪ್ತಿಗೆ ಕೋರ್ಟ್‌ ಆದೇಶಿಸಿದ್ದ ಘಟನೆ ಮಾಸುವ ಮುನ್ನವೇ, ಇಂತಹುದ್ದೇ ಮತ್ತೊಂದು ಘಟನೆ ನಡೆದಿದೆ.

ರಸ್ತೆ ಕಾಮಗಾರಿ ಮಾಡಿದರೂ ಬಿಲ್ ಪಾವತಿ ಮಾಡದ ಲೋಕೋಪಯೋಗಿ ಇಲಾಖೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಗುತ್ತಿಗೆದಾರರರೊಬ್ಬರ ಹಣ ಪಾವತಿಗಾಗಿ ಪಿಡಬ್ಲ್ಯೂಡಿ ಕಚೇರಿಯ ಪೀಠೋಪಕರಣಗಳ ಜಪ್ತಿ ಮಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಇದೇ ವಿಚಾರಕ್ಕಾಗಿ, 2024 ರಲ್ಲಿಯೂ ಪೀಠೋಪಕರಣಗಳ ಜಪ್ತಿ ನಡೆದಿದ್ದಾಗ, ಮೂರು ತಿಂಗಳಲ್ಲಿ ಹಣ ಪಾವತಿಸುವುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಇಲಾಖೆ, ಈವರೆಗೂ ಬಾಕಿ ಹಣ ಕೊಡದಿದ್ದರಿಂಧ, ಕಚೇರಿಯ ಪೀಠೋಪಕರಣಗಳ ಜಪ್ತಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ, ಗುರುವಾರ ವಕೀಲರಾದ ಬಸವರೆಡ್ಡಿ ಕಂದಕೂರ ಹಾಗೂ ಶರಣಗೌಡ ಅಲ್ಲಿಪೂರ ಅವರ ತಂಡ ಜಪ್ತಿ ಕಾರ್ಯ ನಡೆಸಿದೆ.

* ಏನಿದು ಘಟನೆ ?

2015-16 ರಲ್ಲಿ ಯಾದಗಿರಿ ನಗರದ ಡಾ. ಅಂಬೇಡ್ಕರ್ ವೃತ್ತದಿಂದ ಹತ್ತಿಕುಣಿ ಕ್ರಾಸ್‌ವರೆಗೆ ರಸ್ತೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣ ಕಾರ್ಯ ನಡೆದಿತ್ತು. ಸುಮಾರು ₹5.55 ಕೋಟಿ ಮೊತ್ತದ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಎಸ್‌. ಎಸ್‌. ಪಾಟೀಲ್‌ ಈ ಕಾಮಗಾರಿ ನಿರ್ವಹಿಸಿದ್ದರು. ಈ ಒಟ್ಟು ಮೊತ್ತ ₹5.55 ಕೋಟಿಗಳಲ್ಲಿ ₹1.55 ಕೋಟಿ ಬಾಕಿಯುಳಿಸಿಕೊಂಡಿದ್ದ ಪಿಡಬ್ಲ್ಯೂಡಿ ಕಚೇರಿ, ಹಣ ನೀಡದೇ ಸತಾಯಿಸುತ್ತಿತ್ತೆನ್ನಲಾಗಿದೆ.

ಗುತ್ತಿಗೆದಾರರು ನ್ಯಾಯಾಲಯ ಕೊರೆ ಹೋಗಿದ್ದಾಗ, ಬಡ್ಡಿ ಸಮೇತ ₹1.95 ಕೋಟಿ ಹಣ ನೀಡುವಂತೆ ಆದೇಶಿಸಿದ್ದರೂ ಬಿಲ್‌ ಪಾವತಿಯಾಗಿರಲಿಲ್ಲ. ಹೀಗಾಗಿ, ಗುರುವಾರ ಪಿಡಬ್ಲ್ಯೂಡಿ ಕಚೇರಿಯಲ್ಲಿನ ಪೀಠೋಪಕರಣಗಳು, ಕಂಪ್ಯೂಟರ್, ಏರ್‌ ಕಂಡೀಷ್ನರ್‌ ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲಾಗಿದೆ ಎಂದು ನ್ಯಾಯವಾದಿ ಬಸವರೆಡ್ಡಿ ಕಂದಕೂರ "ಕನ್ನಡಪ್ರಭ "ಕ್ಕೆ ತಿಳಿಸಿದರು.

-

27ವೈಡಿಆರ್4 : ಗುತ್ತಿಗೆದಾರರೊಬ್ಬರ ಬಿಲ್‌ ಪಾವತಿ ಮಾಡದ ಹಿನ್ನೆಲೆ, ಕೋರ್ಟ್‌ ಆದೇಶದಂತೆ ಗುರುವಾರ ಯಾದಗಿರಿಯ ಪಿಡಬ್ಲ್ಯೂಡಿ ಕಚೇರಿಯಲ್ಲಿನ ಪೀಠೋಪಕರಣಗಳು, ಕಂಪ್ಯೂಟರ್, ಏರ್‌ ಕಂಡೀಷ್ನರ್‌ ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲಾಗಿದೆ.

-

27ವೈಡಿಆರ್5 : ಗುತ್ತಿಗೆದಾರರೊಬ್ಬರ ಬಿಲ್‌ ಪಾವತಿ ಮಾಡದ ಹಿನ್ನೆಲೆ, ಕೋರ್ಟ್‌ ಆದೇಶದಂತೆ ಗುರುವಾರ ಯಾದಗಿರಿಯ ಪಿಡಬ್ಲ್ಯೂಡಿ ಕಚೇರಿಯಲ್ಲಿನ ಪೀಠೋಪಕರಣಗಳು, ಕಂಪ್ಯೂಟರ್, ಏರ್‌ ಕಂಡೀಷ್ನರ್‌ ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲಾಗಿದೆ.