ಪರಿಶೀಲನೆಯ ವೇಳೆ ಈ ವ್ಯಕ್ತಿ ಈ ಹಿಂದೆ ಬೀಕ್ಕೋಡು ಭಾಗದಲ್ಲಿಯೂ ಕ್ಲಿನಿಕ್ ನಡೆಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದ್ದು, ಕೆಲಕಾಲ ಕಾಣೆಯಾಗಿದ್ದ ಬಳಿಕ ಇದೀಗ ಮತ್ತೆ ಮಲೆನಾಡು ಭಾಗದ ಗೆಂಡೆಹಳ್ಳಿಯಲ್ಲಿ ಕ್ಲಿನಿಕ್ ಆರಂಭಿಸಿರುವುದು ಬೆಳಕಿಗೆ ಬಂದಿದೆ. ಅಗತ್ಯ ದಾಖಲೆಗಳು ಇಲ್ಲದ ಕಾರಣ ಕ್ಲಿನಿಕ್ ಹಾಗೂ ಮೆಡಿಕಲ್ ಶಾಪ್ಗೆ ಅಧಿಕಾರಿಗಳು ಬೀಗ ಹಾಕಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಗೆಂಡೆಹಳ್ಳಿಯಲ್ಲಿ ತಾಲೂಕು ಮಾನವ ಹಕ್ಕು ಹೋರಾಟ ಸಮಿತಿಯವರು ನಕಲಿ ವೈದ್ಯನ ಕ್ಲಿನಿಕ್ಗೆ ಬೀಗ ಹಾಕಿ ಉನ್ನತ ತನಿಖೆಗೆ ಒತ್ತಾಯಿಸಿದ ಘಟನೆ ನಡೆದಿದೆ.ತಾಲೂಕಿನ ಗೆಂಡೆಹಳ್ಳಿ ಸಂತೆ ರಸ್ತೆಯಲ್ಲಿ ನಕಲಿ ವೈದ್ಯನೊಬ್ಬ ಕ್ಲಿನಿಕ್ ತೆರೆದು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿ ತಾಲೂಕು ಮಾನವ ಹಕ್ಕು ಹೋರಾಟ ಸಮಿತಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಸಮಿತಿಯ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ಕ್ಲಿನಿಕ್ ನಡೆಸುತ್ತಿದ್ದ ವ್ಯಕ್ತಿಯಿಂದ ವೈದ್ಯಕೀಯ ಪದವಿ, ನೋಂದಣಿ ಪ್ರಮಾಣಪತ್ರ (ಲೈಸೆನ್ಸ್) ಹಾಗೂ ಗುರುತಿನ ಚೀಟಿಯನ್ನು ಕೇಳಿದಾಗ ಯಾವುದೇ ದಾಖಲೆಗಳನ್ನು ಕೊಡಲು ಪರದಾಡಿದ್ದಾನೆ. ಈ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ವಿಜಯ್ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು ಪರಿಶೀಲನೆ ನಡೆಸಲಾಯಿತು.ಪರಿಶೀಲನೆಯ ವೇಳೆ ಈ ವ್ಯಕ್ತಿ ಈ ಹಿಂದೆ ಬೀಕ್ಕೋಡು ಭಾಗದಲ್ಲಿಯೂ ಕ್ಲಿನಿಕ್ ನಡೆಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದ್ದು, ಕೆಲಕಾಲ ಕಾಣೆಯಾಗಿದ್ದ ಬಳಿಕ ಇದೀಗ ಮತ್ತೆ ಮಲೆನಾಡು ಭಾಗದ ಗೆಂಡೆಹಳ್ಳಿಯಲ್ಲಿ ಕ್ಲಿನಿಕ್ ಆರಂಭಿಸಿರುವುದು ಬೆಳಕಿಗೆ ಬಂದಿದೆ. ಅಗತ್ಯ ದಾಖಲೆಗಳು ಇಲ್ಲದ ಕಾರಣ ಕ್ಲಿನಿಕ್ ಹಾಗೂ ಮೆಡಿಕಲ್ ಶಾಪ್ಗೆ ಅಧಿಕಾರಿಗಳು ಬೀಗ ಹಾಕಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಮಾನವ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ಐ.ಎನ್. ಅರುಣ್ ಕುಮಾರ್ ಮಾತನಾಡಿ, ಗ್ರಾಮೀಣ ಹಾಗೂ ಮಲೆನಾಡು ಭಾಗದ ಮುಗ್ಧ ಜನರು ನಕಲಿ ವೈದ್ಯರು ಮತ್ತು ಅರ್ಹ ವೈದ್ಯರನ್ನು ಗುರುತಿಸಲು ಸಾಧ್ಯವಾಗದೆ ಚಿಕಿತ್ಸೆಗೆ ಹೋಗುತ್ತಾರೆ. ಇಂತಹ ನಕಲಿ ವೈದ್ಯರಿಂದ ಅಮಾಯಕ ಜನರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಾಲೂಕಿನ ಎಲ್ಲಾ ಕ್ಲಿನಿಕ್ಗಳು ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಗೆಂಡೆಹಳ್ಳಿ ಗ್ರಾಮಸ್ಥರು ಮಾತನಾಡಿ, ಮಲೆನಾಡು ವ್ಯಾಪ್ತಿಯ ಗೆಂಡೆಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಮರ್ಪಕ ಸರ್ಕಾರಿ ಆರೋಗ್ಯ ಸೌಲಭ್ಯಗಳ ಕೊರತೆಯಿರುವುದರಿಂದ, ಸರ್ಕಾರ ಈ ಭಾಗದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯನ್ನು ಸ್ಥಾಪಿಸಿ, ಅರ್ಹ ಮತ್ತು ಅನುಭವಿ ವೈದ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ನಿಂಗರಾಜ್, ಗೌರವಾಧ್ಯಕ್ಷ ವೆಂಕಟೇಶ್ ಗೌಡ, ಉಪಾಧ್ಯಕ್ಷ ರತ್ನಾಕರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್, ಪದಾಧಿಕಾರಿಗಳಾದ ರವೀಂದ್ರನಾಥ್, ಸಂತೋಷ್, ಪರಮೇಶ್, ಅಭಿಗೌಡ, ವೀರಭದ್ರಪ್ಪ ಹಾಗೂ ಸ್ಥಳೀಯ ನಿವಾಸಿ ವಿಕಾಸ್, ಗೋಪಾಲ್, ಧನುಷ್, ಸಂದೀಪ್, ಪರ್ವತ ಗೌಡ, ರತನ್, ಭಾಗವಹಿಸಿದ್ದರು.