ಹಾವೇರಿ: ಖಾಸಗಿ ಕಾಲೇಜುಗಳ ಪೈಪೋಟಿ ಮಧ್ಯೆಯೂ ಸರ್ಕಾರಿ ಪಿಯು ಕಾಲೇಜುಗಳಲ್ಲಿನ ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಕರ್ಯಗಳ ಲಭ್ಯತೆ ಗಮನಿಸಿ ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಶ್ಲಾಘನೀಯ ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಇಲ್ಲಿನ ಬಸವೇಶ್ವರ ನಗರದ ಸಿ ಬ್ಲಾಕ್ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಈ ಕಾಲೇಜಿಗೆ ಒಂದು ಕೋಟಿ ರು.ಗಳ ಅನುದಾನದಲ್ಲಿ ನಾಲ್ಕು ಕೊಠಡಿಗಳು, ವಿದ್ಯಾರ್ಥಿಗಳ ಅನುಕೂಲಕ್ಕೆ 15 ಕಂಪ್ಯೂಟರ್, ಹೈಮಾಸ್ಟ್ ವಿದ್ಯುತ್ ಸೌಲಭ್ಯ ಹಾಗೂ ನೀರು ಶುದ್ಧೀಕರಣ ಯಂತ್ರವನ್ನು ಅಳವಡಿಸಲಾಗಿದೆ. ದಾನಿಗಳ ಸಹಕಾರ ಪಡೆದು ಮೈದಾನ ಅಭಿವೃದ್ಧಿ ಮತ್ತು ಸೋರುವ ಕೊಠಡಿಗಳಿಗೆ ಮೇಲ್ಛಾವಣೆ ಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಉತ್ತಮ ಅಧ್ಯಯನದೊಂದಿಗೆ ಕಾಲೇಜಿಗೆ ಮತ್ತು ಪಾಲಕರಿಗೆ ಹೆಸರು ತರಲು ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಅಗ್ನಿವೀರ ಹುದ್ದೆಗೆ ಆಯ್ಕೆಯಾಗಿರುವ ಕಾಲೇಜಿನ ಹಳೆಯ ವಿದ್ಯಾರ್ಥಿ ವಿರೇಶ ಮರೋಳಕೊಪ್ಪದ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಕಾಲೇಜು ಸುಧಾರಣಾ ಸಮಿತಿಯ ಉಪಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪಿಯು ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ನಿಸ್ಸೀಮಗೌಡ್ರ, ಪ್ರಾಚಾರ್ಯ ಆರ್.ಕೆ.ಅಂಬೋರೆ, ಮುಖಂಡ ರಮೇಶ ಆನವಟ್ಟಿ, ಕಾಲೇಜು ಸುಧಾರಣಾ ಸಮಿತಿಯ ನಿಂಗಪ್ಪ ಚಾವಡಿ, ಶಿವಬಸಪ್ಪ ಹುಲಗಣ್ಣನವರ, ಬಸವರಾಜ ಡೊಳ್ಳಿನ, ವೈಶಾಲಿ ಕರಿಸಿದ್ದೇಶ್ವರಮಠ, ಸಂಜನಾ ಮೋರೆ, ಉಪನ್ಯಾಸಕರಾದ ಪ್ರಮೋದ ನಲವಾಗಲ, ಪಿ.ಬಿ. ಬಾರಕೇರ ಇತರರಿದ್ದರು. ಉಪನ್ಯಾಸಕ ಎ.ಎನ್. ಗುದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಬಿ. ಕಣಕಿ, ಕಾಲೇಜು ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಗಾಯತ್ರಿ ನಾಯಕ್ ನಿರೂಪಿಸಿದರು. ಐ.ಡಿ.ಕೊರಗರ ಸ್ವಾಗತಿಸಿದರು.