ಪ್ರಭಾತನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊನ್ನಾವರ

೨೦೨೬-೨೭ನೇ ಸಾಲಿನ ತಾಲೂಕಾ ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾತನಗರದಲ್ಲಿ ಅಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ ಪ್ರವೀಣ್ ಕರಾಂಡೆ, ಇಂದು ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ನಮ್ಮ ಜಿಲ್ಲೆಯಲ್ಲಿಯೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಹೊನ್ನಾವರದಲ್ಲಿದ್ದು, ಅದಕ್ಕೆ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವೇ ನಿದರ್ಶನವಾಗಿದೆ. ತಾಲೂಕಿನ ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪೋಷಕರು ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಸ ಬೇಡಿ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಜಯಶ್ರೀ ನಾಯ್ಕ ಮಾತನಾಡಿ, ಹೊನ್ನಾವರ ತಾಲೂಕು ಶೈಕ್ಷಣಿಕವಾಗಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. ಮಕ್ಕಳನ್ನು ಬಹಳ ಸಡಗರದಿಂದ ಬರಮಾಡಿಕೊಂಡಿದ್ದೆವು. ಸರ್ಕಾರ ಈ ವರ್ಷ ಎಲ್ಲಾ ಶಾಲೆಗಳಲ್ಲಿಯು ದ್ವಿಭಾಷಾ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುತ್ತಾ ಇದೆ. ಇದು ತುಂಬಾ ಸಂತೋಷದ ವಿಚಾರ ಈಗಾಗಲೇ ಎಲ್ಲ ಶಿಕ್ಷಕರಿಗೂ ತರಬೇತಿ ನೀಡಲಾಗಿದೆ. ಈಗಿನ ಪಾಲಕರು ಇಂಗ್ಲಿಷ್ ಮಾಧ್ಯಮದ ಬಗ್ಗೆ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಹಾಗಾಗಿ ನಾವು ಈ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ ಎಂದು ನುಡಿದರು.

ಅಕ್ಷರ ದಾಸೋಹದ ತಾಲೂಕು ಸಹಾಯಕ ನಿರ್ದೇಶಕಿ ಸಹನಾಬಾನು ಪಠಾಣ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರಭಾತನಗರ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಮುಂಜುನಾಥ ಮೇಸ್ತ ಮಾತನಾಡಿದರು.ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ, ರಂಗೋಲಿ ಹಾಕಿ ಶಾಲೆ ಬಂದ ಎಲ್ಲ ಮಕ್ಕಳನ್ನು ವಾಧ್ಯ ಗೋಷ್ಠಿಯ ಮೂಲಕ, ಪುಷ್ಪಾರ್ಚನೆ ಮತ್ತು ಪುಷ್ಪ ನೀಡುವ ಮೂಲಕ ಎಲ್ಲರಿಗೂ ಪೆನ್ನು ನೀಡಿ, ಸಿಹಿಹಂಚಿ, ಸಂಭ್ರ‍್ರಮದಿಂದ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ವಿಶೇಷವಾಗಿ ಮಕ್ಕಳಿಗೆ ಆಕರ್ಷಣೀಯವಾದ ಸೆಲ್ಫಿ ಕಾರ್ನರ್ ಎಲ್ಲರ ಗಮನ ಸೆಳೆಯಿತು. ಎಲ್ಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲಾಯಿತು.ಶಾಲಾ ಮುಖ್ಯಾಧ್ಯಾಪಕ ಎಂ.ಜಿ. ನಾಯ್ಕ ಸ್ವಾಗತಿಸಿದರು. ಬಾಬು ನಾಯ್ಕ ವಂದಿಸಿದರು. ಶಿಕ್ಷಕಿ ಸುನೀತಾ ಮೇಸ್ತ ನಿರೂಪಿಸಿದರು. ಶಿಕ್ಷಕರಾದ ಗಿರಿಜಾ ಗೌಡ, ಕಲಾ ಜಿ.ಎಸ್., ವಿಜಯಾ ಶೇಟ್, ಸುಧಾಕರ ಅಂಕೋಲೆಕರ್, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಜಯಾ ಗಡಕರ್ ಉಪಸ್ಥಿತರಿದ್ದರು.