ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪ್ರಾಥಮಿಕ ಹಂತದಲ್ಲಿ ಗುಣಾತ್ಮಕ ಶಿಕ್ಷಣ ನೀಡಿದರೆ ಉತ್ತಮ ಹಾಗೂ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ (ಪಿ.ಎಂ.ಶ್ರೀ)ಯ ಆವರಣದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆಯವತಿಯಿಂದ ಏರ್ಪಡಿಸಲಾಗಿದ್ದ ೨೦೨೫-೨೬ನೇಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ನಮ್ಮ ಮಾತೃಭಾಷೆ ಅದನ್ನು ಪ್ರೀತಿಸಬೇಕು. ಅದರಂತೆ ಜೀವನಕ್ಕೆ ಅನ್ಯಭಾಷೆಗಳು ಅಗತ್ಯಆದ್ದರಿಂದ ಸರ್ಕಾರವು ಈ ವರ್ಷದಿಂದ ಸರ್ಕಾರಿ ಶಾಲೆಯಲ್ಲೂ ದ್ವಿಭಾಷಾ ಸೂತ್ರ ತಂದಿದ್ದು ಇದನ್ನು ಬಳಸಿಕೊಳ್ಳುವ ಮೂಲಕ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರ್ಪಡೆ ಮಾಡುವ ಮೂಲಕ ಅವುಗಳನ್ನು ಉಳಿಸಬೇಕಾಗಿದೆ. ಇಂದು ಗುಣಮಟ್ಟದ ಉತ್ತಮ ಶಿಕ್ಷಕರನ್ನು ಒಳಗೊಂಡಿರುವ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಸರ್ವತೋಮುಖ ಶಿಕ್ಷಣವನ್ನು ನೀಡಲಾಗುತ್ತದೆ. ಶಾಲೆಯ ಶಿಕ್ಷಕರು ತಮ್ಮ ವೈಯಕ್ತಿಕ ವಿಚಾರಗಳನ್ನ ಶಾಲೆಗೆ ತರದೇ ಕೇವಲ ಶಿಕ್ಷಣ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಕೊಂಡು ಪಾಠಮಾಡಿ ಎಂದರು. ಬಿಇಒ ಕಾಂತರಾಜು ಮಾತನಾಡಿ ನಮ್ಮ ತಾಲೂಕಿನಲ್ಲಿ ಎರಡು ಶಾಲೆಗಳು ಪಿಎಂಶ್ರೀಯಿಂದ ಕೆಪಿಎಸ್ಸಿ ಶಾಲೆಗಳಾಗಿವೆ. ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಸರ್ಕಾರ ಕ್ರಮ ಕೈಗೊಂಡಿದ್ದು ಇದನ್ನು ಬಳಸಿಕೊಂಡು ಉತ್ತಮ ಶಿಕ್ಷಣವನ್ನು ನೀಡಬೇಕಿದೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್ ಸಾಸಲು ಮಾತನಾಡಿ, ಈ ಶಾಲೆಯನ್ನು ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜಒಡೆಯರ್ ಅವಧಿಯಲ್ಲಿ ಪ್ರಾರಂಭಮಾಡಿದ್ದು ಇದಕ್ಕೆ ಜಾಗವನ್ನು ನಮ್ಮ ಪಟ್ಟಣದ ಪಟ್ಟಾಭಿರಾಮಶೆಟ್ಟರು ನೀಡಿದ್ದರು. ಅವರ ಕನಸು ಇಂದು ನನಸಾಗಿದ್ದು ಇಂದು ನಮ್ಮ ಶಾಲೆಯಲ್ಲಿ ೫೦೦ಜನ ವಿದ್ಯಾರ್ಥಿಗಳು ಓದುವಂತಾಗಿದೆ. ಈ ಶಾಲೆಯ ಅಭಿವೃದ್ಧಿಗೆ ಶಾಸಕರು ಸಹಕಾರ ನೀಡಿದ್ದು ಕಳೆದ ಬಾರಿ ೧೮ಲಕ್ಷ ಹಣ ನೀಡಿದ್ದಾರೆ. ಈ ಬಾರಿ ೩೦ಲಕ್ಷ ಅನುದಾನ ಬರಲಿದೆ ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗವಿರಂಗಯ್ಯ, ಹಿರಿಯ ವಿದ್ಯಾರ್ಥಿಗಳ ಸಂಘದ ಅದ್ಯಕ್ಷ ಶ್ರೀನಿವಾಸಮೂರ್ತಿ ಸೆರಿದಂತೆ ನಿವೃತ್ತ ತಹಸೀಲ್ದಾರ್ ಲಕ್ಷ್ಮಣಪ್ಪ, ಎಸ್ಡಿಎಂ.ಸಿ ಅಧ್ಯಕ್ಷ ರಮೇಶ್, ಟಿಪಿಒ ಚಂದ್ರಶೇಖರ್, ಶಾಲೆಯ ಲತಾ ಸೇರಿದಂತೆ ಇತರರು ಇದ್ದರು.