ಹನುಮಸಾಗರ: ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ಬಸವರಾಜ ಅಕ್ಕಿ ಹೇಳಿದರು.
ಪಟ್ಟಣದ ಶ್ರೀ ಯಮುನಾ (ಅಕ್ಕಿ) ಆಸ್ಪತ್ರೆ ಹಾಗೂ ಡಾ. ಎಂ.ಎಂ. ಜೋಶಿ ನೇತ್ರ ತಜ್ಞ ವಿಜ್ಞಾನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಯಮುನಾ (ಅಕ್ಕಿ) ಆಸ್ಪತ್ರೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ, ದಂತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ಶಿಬಿರದಲ್ಲಿ ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನೇತ್ರ ತಜ್ಞರು ಕಣ್ಣಿನ ವಿವಿಧ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ, ಅಗತ್ಯ ಸಲಹೆಗಳನ್ನು ನೀಡಿದರು. ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಗುರುತಿಸಿ ಮುಂದಿನ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ದಂತ ತಪಾಸಣಾ ವಿಭಾಗದಲ್ಲಿಯೂ ಸಾರ್ವಜನಿಕರಿಗೆ ಹಲ್ಲು ಮತ್ತು ವಸಡು ಸಂಬಂಧಿತ ಕಾಯಿಲೆಗಳ ಕುರಿತು ಮಾಹಿತಿ ನೀಡಲಾಯಿತು. ಹಲ್ಲಿನ ಸ್ವಚ್ಛತೆ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ವೈದ್ಯರು ಜಾಗೃತಿ ಮೂಡಿಸಿದರು. ಶಿಬಿರದಲ್ಲಿ ಡಾ. ಶ್ರೀಕಾಂತ ಕೊಡತಿ, ಮಂಜುನಾಥ ಕೊಡತಿ, ಚಂದಪ್ಪ ಹಕ್ಕಿ ಇದ್ದರು.