ಸಾರಾಂಶ
ಗಜೇಂದ್ರಗಡ: ರಸ್ತೆಗಳು ಅಭಿವೃದ್ಧಿಯ ಜೀವನಾಡಿಗಳಾಗಿದ್ದು, ನಿರ್ಮಾಣ ಮಾಡುವ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಯಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಸ್ಥಳೀಯ ಗದಗ ರಸ್ತೆಯ ನವನಿ ಪ್ಲಾಟ್ನಲ್ಲಿ ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ ೩೬೭(ಭಾನಾಪುರ-ಗದ್ದನಕೇರಿ ಸೆಕ್ಷನ್) ರಲ್ಲಿ ಗಜೇಂದ್ರಗಡ ಪಟ್ಟಣಕ್ಕೆ ಭಾನುವಾರ ಸಂಜೆ ಬೈಪಾಸ್ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ ಈ ದೇಶದ ಜೀವನಾಡಿ. ದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಸಕ್ಷಮವಾದ ರಸ್ತೆಗಳ ನಿರ್ಮಾಣವಾಗಬೇಕಿದೆ. ಈ ದೆಸೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಮುಂದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ನಡೆಯುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಲ್ಯಾಂಡ್ ಅಕ್ವಿಜೇಶನ್ ಸಹ ಪ್ರಮುಖವಾಗಿದೆ. ರೈತರ ಜಮೀನುಗಳಿಗೆ ಲೋಕೊಪಯೋಗಿ ಸಚಿವರು, ಶಾಸಕ ಜಿ.ಎಸ್. ಪಾಟೀಲ ಹಾಗೂ ನಾವು ಕೂಡಿಕೊಂಡು ರೈತರಿಗೆ ಉತ್ತಮ ಪರಿಹಾರ ಕೊಡಿಸುವ ನಿರ್ಧಾರ ಕೈಗೊಂಡಿದ್ದು ಅದನ್ನು ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದ ಅವರು, ಯಲಬುರ್ಗಾ ಭಾಗದೊಂದಿಗೆ ವ್ಯವಹಾರ ಮಾಡಬೇಕಾದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಿದೆ. ಈ ಹಿಂದೆ ನಮಗೆ ಗದಗ-ವಾಡಿ ವಿಷಯದಲ್ಲಿ ಪೆಟ್ಟು ಬಿದ್ದಿದೆ. ಯಲಬುರ್ಗಾ ಟಚ್ ಮಾಡುವ ಸಲುವಾಗಿ ನಮ್ಮನ್ನು ಕಟ್ ಮಾಡಿದ್ದಾರೆ. ಹೀಗಾಗಿ ಈ ಕಾಮಗಾರಿ ವಿಷಯದಲ್ಲಿ ಆಗಬಾರದು ಎಂದು ಎಚ್ಚರಿಕೆಯಿಂದ ಕೆಲಸ ಮಾಡಲಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕದ ಸಂಪರ್ಕ ಮುಖ್ಯವಾದರೆ ಉತ್ತರ ಕರ್ನಾಟಕ ಸಮಗ್ರವಾಗಿ ಏಕತೆಯನ್ನು ಕಾಪಾಡಿಕೊಳ್ಳುತ್ತದೆ. ಅದಕ್ಕೆ ಶ್ರಮಿಸುತ್ತೇನೆ ಎಂದರು.ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ಈ ಭಾಗದ ಜನರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ಧೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೈ ಪಾಸ್ ೫.೬ ಕಿಮೀ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಭೂಮಿ ಕೊಡಲು ಇಲ್ಲಿನ ರೈತರು ಮೀನಮೇಷ ಮಾಡುತ್ತಿದ್ದಾಗ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ. ಜನಪರ ಕಾಳಜಿಯುಳ್ಳ ಸಂಸದರಿದ್ದು ಘೋಷಿಸಿದ ಪ್ರಮಾಣದಲ್ಲಿ ರೈತರಿಗೆ ಹಣವನ್ನು ನೀಡುವ ಪ್ರಯತ್ನವನ್ನು ಮಾಡುತ್ತೇವೆ ಎಂದ ಅವರು, ಈ ಭಾಗದ ಅಭಿವೃದ್ಧಿಗೆ ಸೊರಬ-ಇಲಕಲ್ ಹಾಗೂ ನರಗುಂದ-ಸಿಂಧನೂರ ರಾಷ್ಟ್ರೀಯ ಹೆದ್ದಾರಿಗಳು ಆರಂಭವಾಗಿಲ್ಲ. ಅಲ್ಲದೆ ಗದಗ-ವಾಡಿ ರೈಲ್ವೆ ಮಾರ್ಗ ಮೂಲನಕ್ಷೆಯಲ್ಲಿ ಗಜೇಂದ್ರಗಡ, ನರೇಗಲ್ ಮಾರ್ಗವಾಗಿದ್ದರೂ ಸಹ ಯೋಜನೆ ತಪ್ಪಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ರೈಲ್ವೆ ಓಡಾಟಕ್ಕೆ ಗಟ್ಟಿಧ್ವನಿಯಲ್ಲಿ ಸಂಸದ ಬೊಮ್ಮಾಯಿ ಅವರು ಪ್ರಯತ್ನಿಸಿದರೆ ಅದು ಸಾಧ್ಯವಾಗುವ ವಿಶ್ವಾಸವಿದೆ ಎಂದರು.ಹೊಸ ದಾಖಲೆ ನಿರ್ಮಾಣ ಮಾಡೋಣ: "ಗದಗ-ವಾಡಿ ರೈಲ್ವೆ ಯೋಜನೆ ನಮ್ಮ ಭಾಗದ ಜನರ ಒತ್ತಾಯವಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಸಂಸದ ಬಸವರಾಜ ಬೊಮ್ಮಾಯಿ ತಮ್ಮ ಭಾಷಣದಲ್ಲಿ ರೈಲ್ವೆ ಯೋಜನೆಗಳಿಗೆ ಪ್ಯಾರಲಲ್ ಲೈನ್ಗಳನ್ನು ಕೊಡುವದಿಲ್ಲ, ಇದುವರೆಗೆ ಅಂತಹ ದಾಖಲೆಗಳಿಲ್ಲ. ಹೊಸ ದಾಖಲೆ ನಿರ್ಮಾಣ ಮಾಡಬೇಕಿದೆ. ಅದನ್ನು ಖಂಡಿತವಾಗಿ ನಾವು ಮಾಡುತ್ತೇವೆ ಅದು ಬೇರೆ ವಿಚಾರ ಎನ್ನುವ ಈ ಭಾಗದ ರೈಲ್ವೆ ಹೋರಾಟಗಾರರು ಹಾಗೂ ಜನರ ಧ್ವನಿಗೆ ಕೂಗು ಸೇರಿಸಿದಂತಾಗಿದೆ.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ತೇಲಿ, ಸಿದ್ದಣ್ಣ ಬಂಡಿ, ಅಶೋಕ ನವಲಗುಂದ, ನಿಂಗಪ್ಪ ಕೆಂಗಾರ, ರಾಜು ಸಾಂಗ್ಲೀಕರ, ರೂಪೇಶ ರಾಠೋಡ, ಮುರ್ತುಜಾ ಡಾಲಾಯತ, ವೀರಪ್ಪ ಪಟ್ಟಣಶೆಟ್ಟಿ, ಅಂದಪ್ಪ ಬಿಚ್ಚೂರ, ಶಿವರಾಜ ಘೋರ್ಪಡೆ, ಆರ್.ಕೆ.ಚವ್ಹಾಣ, ಮುತ್ತಣ್ಣ ಕಡಗದ, ಉಮೇಶ ಮಲ್ಲಾಪೂರ, ಶ್ರೀಧರ ಬಿದರಳ್ಲಿ, ಶರಣಪ್ಪ ಚಳಗೇರಿ ಸೇರಿ ಇತರರು ಇದ್ದರು. "ಪಟ್ಟಣದಲ್ಲಿ ನಡೆಯುತ್ತಿರುವ ಬೈ ಪಾಸ್ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಅದರಲ್ಲಿ ರಾಜಿಯಿಲ್ಲ. ಅವರು ಇಲ್ಲಿಯವರೆಗೂ ಭೇಟಿಯಾಗಿಲ್ಲ. ಭೇಟಿಯಾಗುವ ಅವಶ್ಯಕತೆಯಿಲ್ಲ. ನಿಮ್ಮ ಕೆಲಸ ನೀವು ಮಾಡಬೇಕು. ಎಲ್ಲಿ ಹೇಗೆ ಕಾಮಗಾರಿ ಮಾಡಿ ಬಂದಿದ್ದಾರೆ ಗೊತ್ತಿಲ್ಲ. ಆದರೆ ಇಲ್ಲಿ ನಡೆಯುವ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.