ಸಾರಾಂಶ
ಮೂಲಭೂತ ಸೌಕರ್ಯಗಳ ಕೊರತೆಯಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಹೀಗಾಗಿ, ಶಾಲೆಗಳನ್ನು ಮುಚ್ಚುವ ಸ್ಥಿತಿ ಉಂಟಾಗುತ್ತಿದೆ ಎಂದು ಡಾ. ಮಹೇಶ ಜೋಶಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಧಾರವಾಡ
ರಾಜ್ಯದ ಕನ್ನಡ ಶಾಲೆಗಳನ್ನು ಉಳಿಸುವುದರ ಜೊತೆ ಅವುಗಳಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಂತೆ ಸಾಹಿತ್ಯ ಪರಿಷತ್ತಿನಿಂದ ಶೀಘ್ರವೇ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳ ಕೊರತೆಯಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಹೀಗಾಗಿ, ಶಾಲೆಗಳನ್ನು ಮುಚ್ಚುವ ಸ್ಥಿತಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ಕಾನೂನು ಮೊರೆ ಹೋಗಲಾಗುತ್ತಿದೆ ಎಂದರು.
ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಕಾನೂನು ರಚನೆಗೆ ಸುಗ್ರೀವಾಜ್ಞೆ ಹೋರಡಿಸಿದ್ದು, ಈ ಕಾನೂನಿಗೆ ಆಡಳಿತಾತ್ಮಕ ಆದೇಶದ ಮೂಲಕ ಜಾರಿಗೆ ತರಲು ಆಗ್ರಹಿಸಿದ ಜೋಶಿ, ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನದ ನಿರ್ಣಯದಲ್ಲಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಕಾನೂನು ರಚನೆಯೂ ಒಂದು. ಇದನ್ನು ತಕ್ಷಣವೇ ಅನುಷ್ಠಾನಕ್ಕೆ ತರಬೇಕಿದೆ. ಶಿಕ್ಷಣ, ಉದ್ಯೋಗ, ವ್ಯಾಪಾರದಲ್ಲೂ ಕನ್ನಡ ಜಾರಿಗೆ ಬರಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡದಲ್ಲೇ ತೀರ್ಪು ಪ್ರಕಟಿಸುವ ನಿರ್ಣಯ ಜಾರಿಗೆ ತರುವಂತೆ ಸರ್ಕಾರದ ಮೇಲೆ ಸಾಹಿತ್ಯ ಪರಿಷತ್ ಒತ್ತಡ ಹೇರುತ್ತಿರುವುದಾಗಿಯೂ ಪ್ರಶ್ನೆಗೆ ಉತ್ತರಿಸಿದರು.ಮಹಾರಾಷ್ಟ್ರದಲ್ಲಿ ಕನ್ನಡ ಫಲಕಗಳಿಗೆ ಬೆಂಕಿ ಹಚ್ಚಿರುವುದು ರಾಜಕೀಯ ಪ್ರೇರಿತ. ಇದು ಕನ್ನಡಿಗರ ಭಾವನೆಗೆ ಕೊಳ್ಳಿ ಇಟ್ಟಂತೆ. ಇದನ್ನು ತೀವ್ರವಾಗಿ ಖಂಡಿಸಿದ ಡಾ. ಜೋಶಿ, ಮರಾಠಿಗರು ಕುಚೆಷ್ಠೇ ಬಿಟ್ಟು ಕನ್ನಡ ಭಾಷೆಗೆ ಗೌರವ ಕೊಡಲು ಹೇಳಿದರು.