ಗದಗ: ತಂಬಾಕಿನಿಂದ ಕ್ಯಾನ್ಸರ್ ಹೃದಯ ಹಾಗೂ ಶ್ವಾಸ ಸಂಬಂಧಿ ಇತ್ಯಾದಿ ಅನೇಕ ಮಾರಣಾಂತಿಕ ರೋಗಗಳು ಬರುತ್ತವೆ. ಆದ್ದರಿಂದ ತಂಬಾಕು ಸೇವನೆ ತ್ಯಜಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ತಿಳಿಸಿದರು.

ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂಬಾಕು ಸೇವನೆಯಿಂದ ಗಂಟಲು ಕ್ಯಾನ್ಸರ್, ದಂತಕ್ಷಯ, ಬಾಯಿಹುಣ್ಣು, ಬಾಯಿ ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್ ಕಾಯಿಲೆಗಳು ಬರುತ್ತವೆ. ಜತೆಗೆ ತಂಬಾಕಿನಲ್ಲಿರುವ ಸುಮಾರು ಆರು ಸಾವಿರ ರಾಸಾಯನಿಕಗಳು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ತಂಬಾಕು ಸೇವನೆ ನಿಲ್ಲಿಸಿ, ಜೀವನ ಆಯ್ದುಕೊಳ್ಳಿ, ತಂಬಾಕನ್ನಲ್ಲ ಎಂದರು.

ಈ ವೇಳೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಗೋಪಾಲ ಸುರಪುರ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ನವೀನ್ ಕುಮಾರಿ, ವೈ.ವೈ. ಹಕ್ಕಿ, ಗಣೇಶ, ಗುರುರಾಜ ಕೋಟ್ಯಾಳ, ಸುನೀಲ ಹಬೀಬ, ಗುಡದಪ್ಪ ಜಗ್ಗಿನ ಇದ್ದರು. ಬೂದೇಶ ಶಿದ್ದನಗೌಡರ ಪಾರ್ಥಿಸಿದರು. ಲಕ್ಷ್ಮೀ ದೇವದುರ್ಗ ಸ್ವಾಗತಿಸಿದರು. ಸುನಿಲ್ ಬದಿ ಕಾರ್ಯಕ್ರಮ ನಿರೂಪಿಸಿದರು.ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ


ಗದಗ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಂಡರಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ 2026-27ನೇ ಸಾಲಿನ ಐಟಿಐ ಪ್ರವೇಶಕ್ಕಾಗಿ ಪಿಪಿಪಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂ. 22 ಕೊನೆಯ ದಿನ. ಎಲೆಕ್ಟ್ರಿಶಿಯನ್, ಫಿಟ್ಟರ್, ಮೆಕ್ಯಾನಿಕ್‌ ಎಲೆಕ್ಟ್ರಿಕ್ ವೆಹಿಕಲ್, ಅಡ್ವಾನ್ಸಡ್‌ ಸಿಎನ್‌ಸಿ ಟೆಕ್ನಿಷಿಯನ್, ಇಂಡಸ್ಟ್ರೀಯಲ್ ರೊಬೊಟಿಕ್ಸ್‌ ಮತ್ತು ಡಿಜಿಟಲ್ ಮನ್ಯುಫ್ಯಾಕ್ಟರಿಂಗ್ ಟೆಕ್ನಿಷಿಯನ್ ಕೋರ್ಸ್‌ಗಳಿಗೆ ಶೀಟುಗಳನ್ನು ಭರ್ತಿ ಮಾಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಮುಂಡರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿಗೆ ಕೆಲಸದ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಪ್ರಾ. ಚನಸಂಗಪ್ಪ ಗಡೆದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.