ಸಾರಾಂಶ
ನಗರಸಭೆ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು, ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾಗಿದ್ದು, ಇದರ ಜೊತೆಗೆ ಸಾಕು ನಾಯಿಗಳಿಗೆ ಕುತ್ತಿಗೆ ಪಟ್ಟಿ ಹಾಕಲು ಮನವಿ ಮಾಡಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಡಳಿತ ವರ್ಗ ಮುಂದಾಗಿದೆ. ಬೀದಿ ನಾಯಿಗಳ ಕಾಟ ಹೆಚ್ಚಳ; ನಾಗರಿಕರ ಕಳವಳ ಎಂಬ ಶೀರ್ಷೆಕೆಯಡಿ ಕಳೆದ ಫೆ.1 ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ನಗರಸಭೆ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು, ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾಗಿದ್ದು, ಇದರ ಜೊತೆಗೆ ಸಾಕು ನಾಯಿಗಳಿಗೆ ಕುತ್ತಿಗೆ ಪಟ್ಟಿ ಹಾಕಲು ಮನವಿ ಮಾಡಿದೆ.ಇತ್ತೀಚಿನ ದಿನಗಳಲ್ಲಿ ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡುಗಳು ಹಾಗೂ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಡಿತ ಹಾಗೂ ಹಾವಳಿ ಹೆಚ್ಚಾಗಿರುವುದರಿಂದ ನಾಯಿಗಳಿಗೆ ನಗರಸಭೆ ವತಿಯಿಂದ ರಾಯಚೂರು ನಗರದ ಎಲ್ಲಾ ಬೀದಿ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ಮತ್ತು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮ ತಮ್ಮ ಸಾಕು ನಾಯಿಗಳಿಗೆ ಕುತ್ತಿಗೆ ಪಟ್ಟಿಯನ್ನು ಹಾಕಿ ಬಿಡತಕ್ಕದ್ದು. ತಪ್ಪಿದಲ್ಲಿ ಹೊರಗಡೆ ಕಂಡು ಬರುವ ಕುತ್ತಿಗೆ ಪಟ್ಟಿಯಿರದ ನಾಯಿಗಳನ್ನು ಬೀದಿ ನಾಯಿಗಳೆಂದು ಪರಿಗಣಿಸಿ ಚಿಕಿತ್ಸೆಗೆ ಒಳಪಡಿಸಲಾಗುವುದು. ಕಾರಣ ಈ ಕಾರ್ಯಕ್ಕೆ ಎಲ್ಲಾ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.