ಸಾರಾಂಶ
ಭದ್ರಾವತಿ: ನಗರದ ವಿವಿಧೆಡೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ರಾಯರ ದರ್ಶನ ಪಡೆದರು.
ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಬೃಂದಾವನ ವಿವಿಧ ಫಲಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ರಾಯರ ರಥೋತ್ಸವ ಆರಂಭಗೊಂಡು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೂ ಸಾಗಿ ಪುನಃ ಮಠಕ್ಕೆ ಬಂದು ತಲುಪಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ರಾಯರಿಗೆ ಜಯಘೋಷಗಳನ್ನು ಹಾಕಿ ಸಂಭ್ರಮಿಸಿದರು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಿತು. ಶ್ರೀ ಗುರುರಾಜ ಸೇವಾಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ ಹಾಗೂ ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ನಿರಂಜನಾಚಾರ್ಯ, ಮಾಧುರಾವ್, ಗಿರಿ ಆಚಾರ್, ಪವನ್ ಕುಮಾರ್ ಉಡುಪ, ಪ್ರಮೋದ್ ಕುಮಾರ್, ಶುಭ ಗುರುರಾಜ್, ವಿದ್ಯಾನಂದನಾಯಕ, ಪ್ರಶಾಂತ್, ಶಶಿಧರ್, ಕೆ.ಎಸ್.ಸುಧೀಂದ್ರ ಸೇರಿದಂತೆ ಶ್ರೀ ಮಠದ ಸೇವಾಕರ್ತರು ಉಪಸ್ಥಿತರಿದ್ದರು. ಹಳೇನಗರ, ಭೂತನಗುಡಿ, ಚಾಮೇಗೌಡ ಏರಿಯಾ, ಕೇಶವಪುರ ಬಡಾವಣೆ, ಮಾಧವನಗರ, ಹೊಸಮನೆ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. ಜನ್ನಾಪುರ ಜಯತೀರ್ಥ ಗುರುಸಾರ್ವಭೌಮರ ಮಠದಲ್ಲಿ ಮಹೋತ್ಸವ:ಜನ್ನಾಪುರ ಶ್ರೀಮದ್ ಜಯತೀರ್ಥ ಗುರುಸಾರ್ವಭೌಮರ ಮಠದಲ್ಲಿ ೩ ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು. ಪ್ರತಿ ದಿನ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ-ಅಷ್ಟೋತ್ತರ ಪಾರಾಯಣ, ವಿದ್ವಾಂಸರಿಂದ ಉಪನ್ಯಾಸ, ಮಹಾಪೂಜೆ, ನೈವೇದ್ಯ, ಅಲಂಕಾರ, ಬ್ರಾಹ್ಮಣರ ಪೂಜೆ, ಹಸ್ತೋದಕ, ಮಹಾಮಂಗಳಾರತಿ, ಭಜನೆ, ಸಾಂಸ್ಕೃತಿ ಕಾರ್ಯಕ್ರಮಗಳು, ಪಲ್ಲಕ್ಕಿ ಸೇವೆ, ಅಷ್ಠಾವಧಾನ ಮತ್ತು ತೊಟ್ಟಿಲು ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನೆರವೇರಿದವು. ಮಂಗಳವಾರ ಮಧ್ಯಾಹ್ನ ಶ್ರೀ ಗುರುರಾಜರ ದಿವ್ಯ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಶ್ರೀ ರಾಘವೇಂದ್ರ ಗುರುಸಾರ್ವಭೌಮ ಸೇವಾ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸೇವಾಕರ್ತರು ಉಪಸ್ಥಿತರಿದ್ದರು.