ರಾಹುಲ್ ಗಾಂಧಿ ಚುನಾವಣೆ ವ್ಯವಸ್ಥೆ ಬದಲಾವಣೆಗೆ ಹೋರಾಡಲಿ: ವಾಟಾಳ್ ನಾಗರಾಜ್

| Published : Aug 08 2025, 01:00 AM IST

ರಾಹುಲ್ ಗಾಂಧಿ ಚುನಾವಣೆ ವ್ಯವಸ್ಥೆ ಬದಲಾವಣೆಗೆ ಹೋರಾಡಲಿ: ವಾಟಾಳ್ ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಮತಗಳನ್ನು ಕಳ್ಳತನ ಮಾಡಿದ್ದಾರೆಂದು ಲೋಕಸಭೆ ಚುನಾವಣೆ ಮುಗಿದ ಎರಡೂವರೆ ವರ್ಷಗಳ ನಂತರ ಪ್ರತಿಭಟನಾ ಸಮಾವೇಶ ಆಯೋಜಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿರವರು ಮತಗಳ್ಳತನದ ಬದಲು ಚುನಾವಣಾ ವ್ಯವಸ್ಥೆ ಸುಧಾರಣೆಗಾಗಿ ಹೋರಾಟ ನಡೆಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಸಲಹೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಚುನಾವಣೆ ಜಾತಿ, ಹಣ ಹಾಗೂ ಅಧಿಕಾರ ಬಲದ ಮೇಲೆ ನಡೆಯುತ್ತಿದೆ. ಇದು ಸುಧಾರಣೆ ಕಾಣದಿದ್ದರೆ ಮಹಾತ್ಮ ಗಾಂಧಿರವರು ತಂದುಕೊಟ್ಟ ಸ್ವಾತಂತ್ರ್ಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರ ಸಂವಿಧಾನ, ಪ್ರಜಾಪ್ರಭುತ್ವ ಕಳೆದು ಹೋಗುತ್ತದೆ. ಜನರು ದಂಗೆ ಏಳುವ ದಿನಗಳು ದೂರ ಉಳಿದಿಲ್ಲ ಎಂದು ಎಚ್ಚರಿಸಿದರು.ಕಾಂಗ್ರೆಸ್ ಪಕ್ಷದವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿರವರ ನಾಯಕತ್ವದಲ್ಲಿ ಮತಗಳನ್ನು ಕಳ್ಳತನ ಮಾಡಿದ್ದಾರೆಂದು ಲೋಕಸಭೆ ಚುನಾವಣೆ ಮುಗಿದ ಎರಡೂವರೆ ವರ್ಷಗಳ ನಂತರ ಪ್ರತಿಭಟನಾ ಸಮಾವೇಶ ಆಯೋಜಿಸಿದ್ದಾರೆ. ಇದರಿಂದ ಏನು ಪ್ರಯೋಜನ ಆಗುವುದಿಲ್ಲ. ಹೀಗಾಗಿ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ಮುಖಂಡರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಿನ ಚುನಾವಣೆ ವ್ಯವಸ್ಥೆ ಬದಲಾವಣೆ ಕುರಿತು ಗಂಭೀರವಾಗಿ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.ಹಣ ಹಂಚುವುದೇ ತತ್ವ ಸಿದ್ಧಾಂತ:ದೇಶಾದ್ಯಂತ ಚುನಾವಣೆ ವ್ಯವಸ್ಥೆಯಲ್ಲಿ ಅಕ್ರಮ, ಮತಗಳ ಮಾರಾಟ, ಹಣ ಹಂಚುವುದೇ ತತ್ವ ಸಿದ್ಧಾಂತ ಎನ್ನುವಂತಾಗಿದೆ. ಹಣ ಬಲವುಳ್ಳವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಹಣ ಇಲ್ಲದವರು ಚುನಾವಣೆಯಲ್ಲಿ ನಿಲ್ಲದ ವಾತಾವರಣ ಸೃಷ್ಟಿಯಾಗಿದೆ. ಇದನ್ನು ಪ್ರಜಾಪ್ರಭುತ್ವ ಎನ್ನಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.ಜನರ ಸೇವೆ ಮಾಡಲು ಕೋಟ್ಯಂತರ ಮಂದಿ ಆಸಕ್ತರಾಗಿದ್ದಾರೆ. ಆದರೆ, ಜಾತಿ - ಹಣ ಬಲವಿಲ್ಲದ ಕಾರಣ ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿಯೇ ಭ್ರಷ್ಟರು, ದರೋಡೆಕೋರರು, ಕೊಲೆ ಪಾತಕರು, ರೌಡಿಗಳು, ಲೂಟಿಕೋರರು ಲೋಕಸಭೆ, ರಾಜ್ಯಸಭೆ, ಶಾಸನ ಸಭೆಗಳಿಗೆ ಬರುತ್ತಿದ್ದಾರೆ ಎಂದು ಟೀಕಿಸಿದರು.ಇಡೀ ಲೋಕಸಭೆ ಚುನಾವಣೆ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿಯವರ ಕೈಯಲ್ಲಿದೆ. ಯಾವುದಾದರು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ವಲ್ಪ ಬಹುಮತ ಕಳೆದುಕೊಂಡರೆ ಅವರು ಶಾಸಕರನ್ನು ಸಮಾಧಾನ ಪಡಿಸಲು 100 ಕೋಟಿ ನೀಡಲು ಸಿದ್ಧರಾಗಿರುತ್ತಾರೆ. ಇಲ್ಲದಿದ್ದರೆ ಮುಖ್ಯಮಂತ್ರಿ ಹುದ್ದೆ ಕೈತಪ್ಪುವ ಆತಂಕವಿದೆ. ಇದೆಲ್ಲವನ್ನು ನೋಡಿದರೆ ಚುನಾವಣಾ ವ್ಯವಸ್ಥೆ ಸರಿ ಅನಿಸುತ್ತಿದೆಯೇ ಎಂದು ಪ್ರಶ್ನಿಸಿದರು.6 ವರ್ಷ ಸ್ಪರ್ಧೆಗೆ ನಿರ್ಬಂಧ ಹೇರಿ :ರಾಜಕಾರಣಿಗಳು ಮತದಾರರಿಗೆ ಹಣದ ಆಮಿಷ ನೀಡಿ ಮತ ಹಾಕಿಸಿಕೊಳ್ಳುವುದನ್ನು ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಚುನಾವಣೆಗೆ ನಿಂತವರೆಲ್ಲರು ಹಣ ಖರ್ಚು ಮಾಡುತ್ತಾರೆ. ಆದರೆ, ಮತದಾರರು ಹಣ ಮುಟ್ಟಬಾರದು. ಈ ರೀತಿ ಹಂಚುವ ರಾಜಕಾರಣಿಗಳನ್ನು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ನಿರ್ಬಂಧ ಹೇರಬೇಕು. ಆ ಮೂಲಕ ಚುನಾವಣೆ ಪಾರದರ್ಶಕವಾಗಿ ಹಾಗೂ ಮತದಾರರನ್ನು ವ್ಯಾಪಾರದಿಂದ ಮುಕ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಗಳು ಹಣವಂತರ ಕೂಟ ಆಗಬಾರದು. ಹಣವಂತರ ಏಜೆಂಟ್ ಗಳು ಬರಬಾರದು. ಆದ್ದರಿಂದ ರಾಹುಲ್ ಗಾಂಧಿರವರು ಚುನಾವಣಾ ವ್ಯವಸ್ಥೆ ಬದಲಾವಣೆಗಾಗಿ ಹೋರಾಟ ಮಾಡಲಿ ಎಂದು ವಾಟಾಳ್ ನಾಗರಾಜ್ ಸಲಹೆ ನೀಡಿದರು.ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ , ಜಿಲ್ಲಾಧ್ಯಕ್ಷ ಸಿ.ಎಸ್ .ಜಯಕುಮಾರ್ , ತಾಲೂಕು ಅಧ್ಯಕ್ಷ ವಿ.ಎನ್ .ಗಂಗಾಧರ್ , ತಾಲೂಕು ಮಹಿಳಾಧ್ಯಕ್ಷೆ ಭಾಗ್ಯ ಸುಧಾ, ಜಿಲ್ಲಾ ದಲಿತ ಘಟಕ ಅಧ್ಯಕ್ಷ ಕೆ.ಜಯರಾಮು, ಬಿಡದಿ ಘಟಕ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಗೌರವಾಧ್ಯಕ್ಷ ಕೆಂಪರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್ , ಸಹ ಕಾರ್ಯದರ್ಶಿ ಪಿ.ಸುರೇಶ್ , ಮುಖಂಡರಾದ ನಾರಾಯಣಸ್ವಾಮಿ, ಪಾರ್ಥಸಾರಥಿ, ಮಹದೇವ್ ಮತ್ತಿತರರು ಹಾಜರಿದ್ದರು....ಕೋಟ್ ....ನಾನು ಐದು ಚುನಾವಣೆಯಲ್ಲಿ ಮಾತ್ರ ಗೆದ್ದಿದ್ದು, ಹೆಚ್ಚಿನ ಚುನಾವಣೆಯಲ್ಲಿ ಸೋತಿದ್ದೇನೆ. ಇದಕ್ಕೆ ಕಾರಣ ಜಾತಿ ಮತ್ತು ಹಣ ಕಾರಣ. ಇದಿಲ್ಲದಿದ್ದರೆ ನಾನೂ ಗೆಲ್ಲುತ್ತಿದ್ದೆ. ನಾನು ಜಾತಿ ಹೆಸರಿನಲ್ಲಿ ಮತ್ತು ಹಣ ಹಂಚಿ ಗೆಲ್ಲಲು ಇಷ್ಟಪಡಲ್ಲ.- ವಾಟಾಳ್ ನಾಗರಾಜ್ , ರಾಜ್ಯಾಧ್ಯಕ್ಷರು, ಕನ್ನಡ ಚಳವಳಿ ವಾಟಾಳ್ ಪಕ್ಷ.----7ಕೆಆರ್ ಎಂಎನ್ 2.ಜೆಪಿಜಿಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿದರು.