ಹುಬ್ಬಳ್ಳಿ:
ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕಡೆಗಣನೆ ಖಂಡಿಸಿ ಜೂ. 25ರಂದು ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ಕೈಬಿಟ್ಟಿದೆ.ಸೋಮವಾರ ಕನ್ನಡಪ್ರಭ " ಮಂಬಡ್ತಿ ಪರೀಕ್ಷೆ ನಡೆಯದಿದ್ದರೆ ಕನ್ನಡಿಗರ ಅನ್ಯಾಯ " ವೆಂದು ವರದಿಯಿಂದ ಎಚ್ಚೆತ್ತುಕೊಂಡ ಪ್ರತಿಭಟನಾಕಾರರು ಈ ನಿರ್ಧಾರ ಕೈಕೊಂಡಿದ್ದಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಕಡೆಗಣಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಹಿಂದೆಯೂ ಇಂತಹ ವರ್ತನೆ ಖಂಡಿಸಿ ಕಾರ್ಯಕರ್ತರು ಪರೀಕ್ಷೆ ಕೇಂದ್ರಕ್ಕೆ ನುಗ್ಗಿ ಪರೀಕ್ಷೆ ರದ್ದುಪಡಿಸಿದ್ದರು. ಆಗ ಪರೀಕ್ಷಾ ಮಂಡಳಿ ಚೇರಮನ್ ಮುಂಬಡ್ತಿ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದೀಗ ಜೂ.25ರಂದು ನಡೆಯುವ ಪರೀಕ್ಷೆಯಲ್ಲಿ ಕನ್ನಡ ಕಡೆಗಣಿಸಲಾಗಿದೆ. ಇದನ್ನು ಖಂಡಿಸಿ ಅಂದು ಬೆಂಗಳೂರು, ಹುಬ್ಬಳ್ಳಿ, ಮೈಸೂರು ಕೇಂದ್ರಗಳಿಗೆ ಹಾಗೂ ರಾಜ್ಯಾದ್ಯಂತ ರೈಲು ನಿಲ್ದಾಣಗಳಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದರು.ಕನ್ನಡಪ್ರಭ ವರದಿಗೆ ಸ್ಪಂದನೆ:
ಈಗ ಮುಂಬಡ್ತಿ ಪರೀಕ್ಷೆಯಲ್ಲಿ ಶೇ. 90ರಷ್ಟು ಕನ್ನಡಿಗರೇ ಪರೀಕ್ಷೆ ಬರೆಯುತ್ತಿರುವ ಕುರಿತು "ಕನ್ನಡಪ್ರಭ " ಪ್ರಕಟಿಸಿದ ವರದಿ ಆಧರಿಸಿ ಬೆಂಗಳೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಿ ಪ್ರತಿಭಟನೆ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮುಂಬರುವ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡದಿದ್ದರೆ ಉಗ್ರವಾದ ಹೋರಾಟ ನಡೆಸಲಾಗುವುದು. ಆ ವೇಳೆ ಅನಾಹುತ ಸಂಬಂಧಿಸಿದರೆ ರೈಲ್ವೆ ಇಲಾಖೆಯೇ ಹೊಣೆ ಎಂದು ಎಚ್ಚರಿಸಿದರು.
ಕನ್ನಡಿಗರ ಹಕ್ಕುಗಳ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ. ರೈಲ್ವೆ ಸೇರಿದಂತೆ ಎಲ್ಲ ಕೇಂದ್ರದ ಇಲಾಖೆಯಲ್ಲೂ ಕನ್ನಡಕ್ಕೆ ನ್ಯಾಯ ಸಿಗುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.ರೈಲುಸೌಧದಲ್ಲೂ ಸಭೆ...ಹುಬ್ಬಳ್ಳಿ ರೈಲುಸೌಧದಲ್ಲಿ ಸೋಮವಾರ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಕರವೇ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಜೂ. 25ರಂದು ನಡೆಯುತ್ತಿರುವ ಪರೀಕ್ಷೆಯಲ್ಲಿ ಶೇ. 90ರಷ್ಟು ಕನ್ನಡಿಗರೇ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗೆ ಅವಕಾಶ ಮಾಡಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಕಾರ್ಯಕರ್ತರು ಅಂದು ಯಾವುದೇ ರೀತಿಯ ಪ್ರತಿಭಟನೆ ನಡೆಸುವುದಿಲ್ಲ ಎಂದು ಭರವಸೆ ನೀಡಿದರು. ಬಳಿಕ ಮುಂದೆ ನಡೆಯುವ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪರೀಕ್ಷೆ ನಡೆಸುವಂತೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಸಾಗರ ಗಾಯಕವಾಡ, ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ, ರಾಜ್ಯ ಮುಖಂಡ ಹನಮಂತಪ್ಪ ಮೇಟಿ, ಕುಂದಗೋಳ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ, ಸುಮಾ ಮಳಗಿ, ಗಂಗನಗೌಡ ನರಗುಂದ, ಮಲಿಕ್ ರಿಯಾಜ್ ಸೇರಿದಂತೆ ಹಲವರಿದ್ದರು.