ಪುತ್ತೂರು: ಪುತ್ತೂರು ಉಪ್ಪಿನಂಗಡಿ ನಡುವಣ ಹಾರಾಡಿ ರೈಲ್ವೆ ಮೇಲ್ಸೇತುವೆ ಕೆಳಗಡೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಆರಂಭಗೊಂಡಿದ್ದು, ದಿನಂಪ್ರತಿ ನೂರಾರು ವಾಹನಗಳ ಓಡಾಟದ ಒತ್ತಡ ಇರುವ ಈ ರಸ್ತೆಯಲ್ಲಿ ಮುಂದಿನ ೧೫ ದಿನಗಳೊಳಗೆ ಲಘು ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಮಂಗಳವಾರ ಕಾಮಗಾರಿ ವೀಕ್ಷಣೆಗೆ ಬಂದ ಶಾಸಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಬೊಳುವಾರು ಕಡೆಯಿಂದ ವೆಟ್‌ಮಿಕ್ಸ್ ಮತ್ತು ಕಾಂಕ್ರೀಟ್ ಹಾಕಿಕೊಂಡು ಬರಲು ಸೂಚಿಸಿದ ಅವರು, ಗುರುವಾರದೊಳಗೆ ಎಲ್ಲ ಫ್ಲಾಟ್ ಫಾರಂ ಆಗಬೇಕು. ೧೦ ದಿನದೊಳಗೆ ಕಾಂಕ್ರೀಟ್ ಹಾಕಬೇಕು. ಲಾರಿ ಇಲ್ಲ. ಸಿಮೆಂಟ್ ಇಲ್ಲ ಎಂಬ ನೆಪ ಹೇಳುವುದು ಬೇಡ. ತಕ್ಷಣ ಕೆಲಸ ಮುಗಿಯಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಇಲ್ಲಿಯ ಕಾಮಗಾರಿ ಬಗ್ಗೆ ಜವಾಬ್ದಾರಿಯಿಂದ ನೋಡಿಕೊಳ್ಳಿ ಎಂದು ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ರೈ ಅವರಿಗೆ ಶಾಸಕರು ತಿಳಿಸಿದರು. ರಾತ್ರಿ ೮ ಗಂಟೆಯ ತನಕವೂ ಕೆಲಸ ಮಾಡಿ. ರಸ್ತೆ ಬಂದ್ ಆಗಿರುವುದರಿಂದ ವಾಹನಗಳ ತೊಂದರೆ ಇಲ್ಲ ಎಂದು ಅವರು ತಿಳಿಸಿದರು.

ಮನಃಸಾಕ್ಷಿ ತಿದ್ದಿಕೊಳ್ಳಿ: ಅಡ್ಡ ಮತದಾನ ಮತ್ತು ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು ಮನಸ್ಸು ಸರಿ ಇದ್ದರೆ ಆಣೆಪ್ರಮಾಣ ಎಲ್ಲ ಯಾಕೆ. ಮನಸ್ಸಿನಲ್ಲಿ ಕಳ್ಳತನ ಇಟ್ಟುಕೊಂಡು ಆಣೆ ಪ್ರಮಾಣ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಮೊದಲು ಮನಃಸ್ಸಾಕ್ಷಿ ತಿದ್ದಿಕೊಳ್ಳಲಿ. ಅಭಿವೃದ್ಧಿಪರ ಕೆಲಸ ಮಾಡಲಿ ಎಂದರು.

ವಿದ್ಯುತ್ ಖಾಸಗೀಕರಣ ಮಾಡುವ ವಿರುದ್ಧ ಮೆಸ್ಕಾಂನವರು ಪ್ರತಿಭಟನೆಗೆ ಮೊದಲು ತಮ್ಮ ಸೇವೆಯನ್ನು ಉತ್ತಮಗೊಳಿಸಬೇಕು. ವಿದ್ಯುತ್ ಅನ್ನೋದು ಅಂಗಡಿಯಿಂದ ಹಣ ಕೊಟ್ಟ ಸಾಮಗ್ರಿ ತರುವ ಹಾಗೇ ಇರುವ ವ್ಯವಸ್ಥೆ. ವಿದ್ಯುತ್ ಸಂಪರ್ಕ ಪಡೆಯಲು ಜನಸಾಮಾನ್ಯರಿಗೆ ೨೫ ಕಾನೂನು ರೂಪಿಸಿದ್ದಾರೆ. ಮೊದಲು ಇಂತಹ ಅನವಶ್ಯಕ ನಿಮಯಗಳಿಂದ ಹೊರ ಬನ್ನಿ ಎಂದು ಗರಂ ಆಗಿ ಹೇಳಿದರು.