ಸಾರಾಂಶ
ಕೊಳೆಯುವ ಹಂತದಲ್ಲಿ ಅಲ್ಪಕಾಲದ ಬೆಳೆಗಳು । ಧೀರ್ಘಕಾಲದ ಬೆಳೆಗಳಿಗೂ ಕಂಟಕ
ಕನ್ನಡಪ್ರಭ ವಾರ್ತೆ, ತರೀಕೆರೆಲಿಂಗದಹಳ್ಳಿ ಹೋಬಳಿಯಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಗಾಳಿ ಮಳೆಯಿಂದ ಈ ಭಾಗದಲ್ಲಿ ರೈತರು ಬೆಳೆದಿರುವ ಆಲೂಗಡ್ಡೆ, ಬಟಾಣಿ, ಜೋಳ, ಶೇಂಗಾ ಸೇರಿದಂತೆ ಅಲ್ಪಕಾಲದ ಬೆಳೆಗಳೆಲ್ಲವೂ ಕೊಳೆಯುವ ಹಂತದಲ್ಲಿದ್ದು, ಧೀರ್ಘಕಾಲದ ತೋಟದ ಬೆಳೆಗಳಾದ ಅಡಕೆ, ಕಾಫಿ, ಕಾಳು ಮೆಣಸು ಮುಂತಾದ ಬೆಳೆಗಳಿಗೂ ಕಂಟಕವಾಗಿದೆ.
ಅಡಕೆ , ಕಾಫಿ ಮುಂತಾದ ಬೆಳೆಗಳ ಫಸಲಿಗೆ ಕೊಳೆ ರೋಗ ಬಂದಿದ್ದು ಅಡಕೆ, ಕಾಫಿ ಕಾಯಿಗಳು ತೊಟ್ಟು ಕಳಚಿ ನೆಲಕ್ಕುರುಳುತ್ತಿದ್ದು, ಕಳೆದ ಬಾರಿ ಇದ್ದ ಬರಗಾಲದಿಂದ ಬೇಸಿಗೆಯಲ್ಲಿ ಕಷ್ಟುಪಟ್ಟು ಉಳಿಸಿಕೊಂಡಿರುವ ಅಡಕೆ, ಕಾಫಿ ಮುಂತಾದವು ಉದುರುತ್ತಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಇತ್ತ ಗಮನ ಹರಿಸಿ ರೈತರಿಗೆ ಅಗತ್ಯ ಸೌಲಭ್ಯ ನೀಡಬೇಕೆಂದು ಎಂದು ಅಡಕೆ ಬೆಳಗಾರ ನಂದಿಬಟ್ಟಲು ಕೃಷ್ಣೇಗೌಡ ಒತ್ತಾಯಿಸಿದ್ದಾರೆ.ಹೋಬಳಿಯಾದ್ಯಂತ ಕಳೆದ ಅನೇಕ ದಿನಗಳಿಂದ ಮಳೆಯೊಂದಿಗೆ ಹೆಚ್ಚಿದ ಗಾಳಿಯಿಂದ ರಸ್ತೆ ಬದಿಯ ಮರಗಳು ಮತ್ತು ವಿದ್ಯುತ್ ಮಾರ್ಗ ಹಾದು ಹೋಗಿರುವ ಆಸು ಪಾಸುಗಳಲ್ಲಿದ್ದ ಮರಗಿಡಗಳೆಲ್ಲವು ವಿದ್ಯುತ್ ಕಂಬಗಳ ಮೇಲೆ ಉರುಳುತ್ತಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿರುವ ಜೊತೆಗೆ ಆಗಾಗ ವಿದ್ಯುತ್ ಸಂಪರ್ಕ ಕಡಿತವಅಗುತ್ತಿದೆ. ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಲಿಂಗದಹಳ್ಳಿ ಮೆಸ್ಕಾಂ ವಿಭಾಗದ ಸಿಬ್ಬಂದಿ ಗಾಳಿ ಮಳೆಯನ್ನು ಲೆಕ್ಕಿಸದೇ ವಿದ್ಯುತ್ ಮಾರ್ಗದ ಮೇಲೆ ಬಿದ್ದಿರುವ ಮರಗಿಡಗಳು, ಮುರಿದ ಕಂಬಗಳನ್ನು ತೆರವು ಮಾಡಿ ಹೊಸ ಕಂಬಗಳನ್ನು ಅಳವಡಿಸಿ ವಿದ್ಯುತ್ ಮಾರ್ಗ ಸರಿಪಡಿಸಲು ಶ್ರಮಪಡುತ್ತಿದ್ದಾರೆ. ಒಂದು ಕಡೆ ವಿದ್ಯುತ್ ಮಾರ್ಗ ಸರಿಯಾದರೆ ಮತ್ತೊಂದು ಕಡೆ ಮರ ಗಳು ಬಿದ್ದು ಕಂಬಗಳು ಮುರಿದು ಬೀಳುತ್ತಿರುವುದರಿಂದ ಕೆಮ್ಮಣ್ಣಗುಂಡಿ, ತಣಿಗೆಬೈಲು ಹಾಗೂ ಈ ಭಾಗದ ಕಾಫಿ ತೋಟಗಳಿಗೆ ಸಮರ್ಪಕ ವಿದ್ಯುತ್ ಒದಗಿಸಲು ಹರಸಾಹಸ ಪಡುತ್ತಿದ್ದಾರೆ. ಮಲೆನಾಡು ಪ್ರದೇಶವಾದ ಲಿಂಗದಹಳ್ಳಿ ಹೋಬಳಿಯಿಂದ ಕೆಮ್ಮಣ್ಣಗುಂಡಿ, ಕಲ್ಲತ್ತಿಗಿರಿ, ತಣಿಗೆಬೈಲು, ದೂಪದಖಾನ್, ದಂಡು ಬಿಡಾರ, ನಂದಿಗಾವೆ ಸೇರಿದಂತೆ ತರೀಕೆರೆ, ಎನ್.ಆರ್.ಪುರ, ಚಿಕ್ಕಮಗಳೂರು ತಾಲೂಕುಗಳ ಗ್ರಾಮಗಳಿಗೆ ವಿದ್ಯುತ್ ಒದಗಿಸಬೇಕಾಗಿದ್ದು ಈ ಗ್ರಾಮಗಳು ಭದ್ರ ಅಭಯಾರಣ್ಯದ ಅಂಚಿನಲ್ಲಿವೆ. ಈ ಭಾಗದ ಮರ ಗಿಡಗಳು ವಿದ್ಯುತ್ ಮಾರ್ಗದ ಮೇಲೆ ಬೀಳುತ್ತಿರುವುದರಿಂದ ಕಾಡಿನ ಮಧ್ಯೆ ಹಾದು ಹೋಗಿರುವ ವಿದ್ಯುತ್ ಮಾರ್ಗವನ್ನು ಸರಿಪಡಿಸುವುದೇ ಸವಾಲಿನ ಕೆಲಸ. ಈ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದೇವೆ ಎಂದು ಲಿಂಗದಹಳ್ಳಿ ವಿಭಾಗದ ಜೂನಿಯರ್ ಇಂಜಿನಿಯರ್ ತಿಪ್ಪೇಶ್ ತಿಳಿಸಿದ್ದಾರೆ.26ಕೆಟಿಆರ್.ಕೆ.12ಃ
ಲಿಂಗದಹಳ್ಳಿಯಿಂದ ತಣಿಗೆಬೈಲು , ಕೆಮ್ಮಣ್ಣಗುಂಡಿ ಕಡೆಗೆ ಹೋಗುವ ರಸ್ತೆ ಮತ್ತು ಪಕ್ಕದಲ್ಲಿದ್ದ ವಿದ್ಯುತ್ ಮಾರ್ಗದ ಮೇಲೆ ಬೃಹತ್ ಮರ ಬಿದ್ದಿದ್ದು ಇದರ ತೆರವಿನ ಕಾರ್ಯವನ್ನು ಮೆಸ್ಕಾಂ ಸಿಬ್ಬಂದಿ ಮಾಡಿದರು.