ಕಬ್ಬರಗಿಯ ಕಪಿಲತೀರ್ಥ ಜಲಪಾತಕ್ಕೆ ಜೀವಕಳೆ ತಂದ ಮಳೆರಾಯ

| Published : May 25 2024, 12:50 AM IST

ಕಬ್ಬರಗಿಯ ಕಪಿಲತೀರ್ಥ ಜಲಪಾತಕ್ಕೆ ಜೀವಕಳೆ ತಂದ ಮಳೆರಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಕಪಿಲತೀರ್ಥ ಮಿನಿ ಜಲಪಾತ ಗುರುವಾರ ಸಾಯಂಕಾಲ ಸುರಿದ ಭಾರಿ ಮಳೆಗೆ ಮೈದುಂಬಿ ಧುಮ್ಮುಕ್ಕುತ್ತಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಬೇಸಿಗೆಯ ದಿನದಲ್ಲಿ ಭಣಗುಡುತ್ತಿದ್ದ ತಾಲೂಕಿನ ಕಬ್ಬರಗಿ ಗ್ರಾಮದ ಕಪಿಲತೀರ್ಥ ಮಿನಿ ಜಲಪಾತವು ಗುರುವಾರ ಸಾಯಂಕಾಲ ಸುರಿದ ಭಾರಿ ಮಳೆಗೆ ಮೈದುಂಬಿ ಧುಮ್ಮುಕ್ಕುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಈ ಜಲಪಾತವು ಜಿಲ್ಲಾ ಕೇಂದ್ರ ಕೊಪ್ಪಳದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದ್ದು, ಹೈದರಾಬಾದ್‌ ಕರ್ನಾಟಕದಲ್ಲಿರುವ ಏಕೈಕ ಜಲಪಾತ ಎಂಬ ಹೆಗ್ಗಳಿಕೆ ಪಡೆದಿದೆ. ಬೇಸಿಗೆಯ ದಿನದಲ್ಲಿ ಈ ಜಲಪಾತದಲ್ಲಿ ನೀರು ಇರುವುದಿಲ್ಲ. ಆದರೆ ಈ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಜಲಪಾತದಲ್ಲಿ ನೀರು ಧುಮ್ಮುಕ್ಕುತ್ತಿರುವ ದೃಶ್ಯ ಕಾಣಬಹುದಾಗಿದೆ.

ಮಳೆಯಾಶ್ರಿತ ಜಲಪಾತ ಇದಾಗಿದ್ದು, ದೊಡ್ಡ ಮಳೆಯಾಗಿ ಬೆಟ್ಟದಲ್ಲಿ ಸೆಲೆ ಉಂಟಾಗಿ ಚಿಕ್ಕ ಕೆರೆಗಳ ಮೂಲಕ ನೀರು ಸಾಗಿ ಬಂದು ಸುಮಾರು 20 ಅಡಿ ಮೇಲಿನಿಂದ ಕೆಳಕ್ಕೆ ಧುಮ್ಮಿಕ್ಕುತ್ತದೆ. ಈ ಜಲಪಾತಕ್ಕೆ ಹೊಂದಿಕೊಂಡೇ ಶಿವಲಿಂಗವಿದೆ. ಇದನ್ನು ಹಿಂದೆ ಕಪಿಲಮುನಿ ಎಂಬ ತಪಸ್ವಿ ಸ್ಥಾಪಿಸಿದ್ದರು. ಅವರು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರು ಎಂಬ ಪ್ರತೀತಿಯಿದೆ. ಕಪಿಲಮುನಿ ಹೆಸರೇ ಜಲಪಾತಕ್ಕೆ ಬಂದಿದ್ದು ಕಪಿಲತೀರ್ಥ ಎಂದು ಕರೆಯಲಾಗುತ್ತದೆ. ಕೆಲವು ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದರೆ ಇದು ಉತ್ತಮ ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ.

ನೀರಿನ ಮೂಲ: ಕಪೀಲತೀರ್ಥದ ಗುಡ್ಡವು ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು, ಬದಾಮಿಯಿಂದ ಬೆಳಗಾವಿ ವರೆಗೂ ಇದೆ. ಈ ಗುಡ್ಡಗಳ ಮೇಲೆ ವೆಂಕಟಾಪುರ, ಗಾಣದಾಳ ಎಂಬ ಊರು ಇದೆ. ಅಲ್ಲಲ್ಲಿ ಸಣ್ಣ ಕೆರೆಗಳು ಇವೆ. ಮಳೆಯಾದರೆ ಸಾಕು ಕೆರೆಗಳಿಂದ ನೀರು ಹರಿದು ಬರುವುದು. ಕಪೀಲತೀರ್ಥ ಜಲಪಾತದಲ್ಲಿ ಸುಮಾರು 20-35 ಅಡಿ ಎತ್ತರದಿಂದ ನೀರು ಬೀಳುವುದು. ಯಾವುದೇ ಅಳುಕು, ಅಂಜಿಕೆ ಇಲ್ಲದೇ ಇಲ್ಲಿಗೆ ಬಂದ ಜನರು ಮೈಒಡ್ಡುತ್ತಾರೆ. ಮಕ್ಕಳು, ಯುವಕರಿಗೆ ಮಜಾ ನೀಡುತ್ತದೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರಿಂದ ಸ್ಥಳೀಯ ವ್ಯಾಪಾರಿಗಳಿಗೂ ಹೆಚ್ಚಿನ ವ್ಯಾಪಾರ ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಸಾವಿರಾರು ಜನರು ಆಗಮನ: ಕಪೀಲತೀರ್ಥ ತುಂಬಿ ಹರಿಯುತ್ತಿದೆ ಎಂದು ಸುದ್ದಿ ತಿಳಿದು ಸಾವಿರಾರು ಜನರು ಈ ಜಲಪಾತದ ಕಡೆ ಮುಖ ಮಾಡಿದ್ದಾರೆ.