ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ಕಡು ಬೇಸಿಗೆಯಿಂದ ಬೆಂದಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಕಬ್ಬು ನೀರಿಲ್ಲದೇ ಒಣಗುವ ಹಂತಕ್ಕೆ ಬಂದಿತ್ತು. ಭಾನುವಾರ ಸುರಿದ ಮಳೆ ಬೆಳೆಗಳಿಗೆ ಅಮೃತ ಸಿಂಚನ ಮಾಡಿದಂತಾಗಿದೆ. ಕೃಷ್ಣಾ ನದಿಯಲ್ಲಿ ನೀರು ಬತ್ತಿ ಹೋಗಿದ್ದರಿಂದ ನದಿಯ ನೀರನ್ನು ಆಶ್ರಯಿಸಿ ಕೃಷಿ ಮಾಡುತ್ತಿದ್ದವರಿಗೆ ಬೆಳೆಗಳು ಒಣಗುವ ಭೀತಿ ಎದುರಾಗಿತ್ತು. ಮಳೆ ಬಂದು ಜಮೀನು ಗದ್ದೆಗಳು ಜಲಾವೃತವಾಗಿದ್ದು, ರೈತಾಪಿವರ್ಗ ಸಂತಸ ವ್ಯಕ್ತ ಪಡಿಸಿದೆ. ಕಬ್ಬು ನಾಟಿ ಮಾಡಲು ಸಿದ್ಧ ಪಡಿಸಿಕೊಂಡಿದ್ದ ಜಮೀನುಗಳಲ್ಲಿ ನೀರು ಹರಿದಿದ್ದು, ಇನ್ನು ಬಿತ್ತನೆ ಕಾರ್ಯಕ್ಕೆ ವೇಗ ದೊರೆಯಲಿದೆ. ಹಿರೇಪಡಸಲಗಿ, ಸಾವಳಗಿ, ತೊದಲಬಾಗಿ, ಚಿಕ್ಕಪಡಸಲಗಿ, ಆಲಗೂರು ಕುಂಬಾರಹಳ್ಳ, ಜಂಬಗಿ, ಟಕ್ಕಳಕಿ, ಟಕ್ಕೊಡ ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಮಾಹಿತಿ ಲಭ್ಯವಾಗಿದೆ.