ಬಂಟ್ವಾಳ ತಾಲೂಕಿನಲ್ಲಿ ಮಳೆ ಹಾನಿ, ಇಬ್ಬರಿಗೆ ಗಾಯ

| Published : Jun 13 2024, 12:51 AM IST

ಸಾರಾಂಶ

ಘಟನಾ ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಬಂಟ್ವಾಳ: ತಾಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಪುರಸಭಾ ವ್ಯಾಪ್ತಿಯಲ್ಲಿ ಮನೆಯೊಂದರ ಆವರಣಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಪುರಸಭಾ ವ್ಯಾಪ್ತಿಯ ಗುಡ್ಡೆಯಂಗಡಿ‌ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.

ಗುಡ್ಡೆಯಂಗಡಿ ನಿವಾಸಿಗಳಾದ ಮಹಮ್ಮದ್ ಸಾಧಿಕ್, ಮಹಮ್ಮದ್ ರಫೀಕ್ ಗಾಯಗೊಂಡವರಾಗಿದ್ದು, ಇಬ್ಬರೂ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಮಹಮ್ಮದ್ ಸಾಧಿಕ್ ಅವರಿಗೆ ಗಂಭೀರವಾಗಿ ಗಾಯವಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಗುಡ್ಡೆಯಂಗಡಿ ಅಬ್ದುಲ್ ರಹಮಾನ್ ಎಂಬವರ ಮನೆಯ ಕಂಪೌಂಡ್ ರಾತ್ರಿ ಸುರಿದ ಮಳೆಗೆ ರಸ್ತೆಗೆ ಬಿದ್ದಿದೆ. ಮಧ್ಯ ರಾತ್ರಿ ಸುಮಾರು 12 ಗಂಟೆ ವೇಳೆ ಲಾರಿ ನಿಲ್ಲಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಂಪೌಂಡ್ ಜರಿದು ಬಿದ್ದು ಇವರಿಬ್ಬರಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ತುಂಬೆ ಗ್ರಾಮದ ನಳಿನಾಕ್ಷಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಕಳ್ಳಿಗೆ ಗ್ರಾಮದ ನವೀನ್‌ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.