ಕನ್ನಡಪ್ರಭ ವಾರ್ತೆ ಕೊರಟಗೆರೆ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಶಾಲೆ, ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸೇರಿ ವಿವಿಧ ಭಾಗಗಳು ಜಲಾವೃತಗೊಂಡಿರುವ ಘಟನೆ ನಡೆದಿದೆ.ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾ.ಪಂ ವ್ಯಾಪ್ತಿಯ ಕಾಶಾಪಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೭೮ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಚರಂಡಿಯಲ್ಲಿ ಹರಿಯಬೇಕಾದ ನೀರು ನೇರವಾಗಿ ಸರ್ಕಾರಿ ಶಾಲೆಗೆ ನುಗ್ಗಿದೆ. ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು ಮಕ್ಕಳು ಎಲ್ಲಿ ಕುಳಿತು ಪಾಠ ಕೇಳಬೇಕು ಎಂದು ಗ್ರಾಮಸ್ಥರು ದೂರಿದರು.ಕೊರಟಗೆರೆ ಪಟ್ಟಣದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ತಗ್ಗು ಪ್ರದೇಶವಾಗಿದ್ದು ಮಳೆ ಬಂದರೆ ಸಾಕು ಪಾರ್ಕಿಂಗ್ ಸ್ಥಳ ಕೆರೆಯಂತೆ ಭಾಸವಾಗುತ್ತದೆ. ಬಸ್‌ನಲ್ಲಿ ಬರುವ ಪ್ರಯಾಣಿಕರು ನೀರಿನಲ್ಲೇ ಸಂಚಾರ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಹೊರವಲಯದಲ್ಲಿರುವ ಬೈಪಾಸ್ ರಸ್ತೆ ಜಲಾವೃತವಾಗಿದ್ದು ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೈಪಾಸ್ ರಸ್ತೆ ನೀರಿನಿಂದ ತುಂಬಿದೆ. ಸುವರ್ಣಮುಖಿ ಪೆಟ್ರೋಲ್ ಬಂಕ್ ಮುಂದೆ ಕೊರಟಗೆರೆ ಬೆಂಗಳೂರು, ಹೋಗುವ ರಸ್ತೆಯಲ್ಲಿ ಸರಿಯಾಗಿ ಚರಂಡಿಗೆ ನೀರು ಹೋಗದೆ ಇರುವ ಕಾರಣ ರಸ್ತೆ ತುಂಬಾ ನೀರು ಹರಿಯುತ್ತಿದ್ದು, ಇದೆ ರೀತಿ ರಸ್ತೆಯಲ್ಲಿ ನೀರು ನಿಂತರೆ ರಸ್ತೆಯ ಡಾಂಬರ್ ಹೋಗಿ ಗುಂಡಿ ಬಿಳುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ತಿಳಿಸಿದರು.