ಮಳೆಗಾಲ ಆರಂಭ; ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

| Published : May 26 2025, 12:12 AM IST

ಮಳೆಗಾಲ ಆರಂಭ; ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ 67 ಗ್ರಾಮಗಳು ನೆರೆಗೆ ಸಿಲುಕಬಹುದು ಎಂದು ಈಗಾಗಲೇ‌ ಗುರುತಿಸಲಾಗಿದೆ. ಈ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕು. ತಹಸೀಲ್ದಾರ್‌ಗಳು ಗ್ರಾಮ ಪಂಚಾಯ್ತಿಗಳೊಂದಿಗೆ ಸಭೆ ನಡೆಸಿ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅವಶ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಅಗತ್ಯ ವ್ಯವಸ್ಥೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ಹವಾಮಾನ ಇಲಾಖೆ ವರದಿ ಪ್ರಕಾರ ಈ ಬಾರಿ ವಾಡಿಕೆಕ್ಕಿಂತ‌ ಹೆಚ್ಚು ಮಳೆಯಾಗುವ ಸಾಧ್ಯತೆ ಬಗ್ಗೆ ವರದಿಗಳು ಬಂದಿವೆ. ಅಧಿಕಾರಿಗಳು ಯಾವುದೇ ಹಾನಿ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಆಗಬಹುದಾದ ಹಾನಿ ಕುರಿತು ಮುನ್ನೆಚ್ಚರಿಕಾ ಕ್ರಮ ಹಾಗೂ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮಳೆ ಹಿನ್ನೆಲೆಯಲ್ಲಿ ಅಗ್ನಿಶಾಮಕ, ಚೆಸ್ಕಾಂ, ಅರಣ್ಯ, ತಹಸೀಲ್ದಾರ್, ನಗರ ಸ್ಥಳೀಯ ಸಂಸ್ಥೆಗಳು 24*7 ಕಾರ್ಯ ನಿರ್ವಹಿಸುವ ಕಂಟ್ರೋಲ್‌ ರೂಂ ಸ್ಥಾಪಿಸಬೇಕು ಹಾಗೂ ಸಾರ್ವಜನಿಕರು ಸಂಪರ್ಕಿಸಬೇಕಿರುವ ದೂರವಾಣಿ ಸಂಖ್ಯೆ ಮಾಹಿತಿ ನೀಡಬೇಕು ಎಂದರು.

ಅಗ್ನಿ ಶಾಮಕ ಇಲಾಖೆಗಳು ಅತಿವೃಷ್ಟಿ ವೇಳೆ ಬೇಕಿರುವ ಬೋಟ್, ಲೈಫ್ ಜೆಕಾಟ್ ಸೇರಿದಂತೆ ಇನ್ನಿತರೆ ಪರಿಕರಗಳು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಸ್ಥಳೀಯ ನುರಿತ ಈಜುಗಾರರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 67 ಗ್ರಾಮಗಳು ನೆರೆಗೆ ಸಿಲುಕಬಹುದು ಎಂದು ಈಗಾಗಲೇ‌ ಗುರುತಿಸಲಾಗಿದೆ. ಈ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕು. ತಹಸೀಲ್ದಾರ್‌ಗಳು ಗ್ರಾಮ ಪಂಚಾಯ್ತಿಗಳೊಂದಿಗೆ ಸಭೆ ನಡೆಸಿ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅವಶ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಅಗತ್ಯ ವ್ಯವಸ್ಥೆ ಮಾಡಬೇಕು ಎಂದರು.

ಅರಣ್ಯ ಇಲಾಖೆಯಿಂದ ದುರ್ಬಲ ಮರ ಹಾಗೂ ಮರದ ಕೊಂಬೆಗಳು ನಿಯಮಾನುಸಾರ ತೆರವುಗೊಳಿಸಬೇಕು. ವಿದ್ಯುತ್ ತಂತಿಗಳು ಮರಗಳ ಮೇಲಿದ್ದರೆ ಯಾವುದೇ ತೊಂದರೆಯಾಗದಂತೆ ಸೆಸ್ಕ್ ಇಲಾಖೆಯ ಸಮನ್ವಯದೊಂದಿಗೆ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆ ಆರೋಗ್ಯ ಸಮಿತಿಯನ್ನು ಚುರುಕುಗೊಳಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಮಳೆಗಾಲದಲ್ಲಿ ವಿಷಪೂರಿತ ಹಾವುಗಳ ಕಡಿತದ ಪ್ರಕರಣಗಳು ಉಂಟಾಗುವ ಸಾಧ್ಯತೆ ಇದೆ. ಹಾವು ಕಡಿತಕ್ಕೆ ಔಷಧಿಗಳ ದಾಸ್ತಾನುಗಳು ಆಸ್ಪತ್ರೆಗಳಲ್ಲಿ ಸಮರ್ಪಕವಾಗಿರಲಿ ಎಂದರು.

ಅಧಿಕಾರಿಗಳು ಮಳೆ ಹಾನಿಯಾದ ನಂತರ ಕ್ರಮ ಕೈಗೊಳ್ಳುವುದಲ್ಲ. ಮೊದಲೇ ಕ್ರಮ ಕೈಗೊಂಡರೆ ಬಹಳಷ್ಟು ಹಾನಿ ತಡೆಗಟ್ಟಬಹುದು. ಆದರಿಂದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಕೆಲಸ ನಿರ್ವಹಿಸಬೇಕು ಎಂದು ಎಚ್ಚರಿಸಿದರು.

ಅತಿವೃಷ್ಟಿಯಿಂದ ಬೆಳೆ ಹಾನಿಯಾದಲ್ಲಿ ತಕ್ಷಣ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅವರು ತಕ್ಷಣ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು. ತಾಲೂಕು ಆಡಳಿತ ಮನೆ ಹಾನಿಯಾದರೆ ನಿಗದಿತ ಅವಧಿಯಲ್ಲಿ ಪರಿಹಾರ ಪಾವತಿ ಮಾಡಬೇಕು. ಎಸ್.ಡಿ.ಆರ್.ಎಫ್ ಅನುದಾನದಡಿ ಈಗಾಗಲೇ ತಹಸೀಲ್ದಾರ್ ಬಳಿ ಎಲ್ಲಾ ತಾಲೂಕುಗಳು ಸೇರಿ ಒಟ್ಟು 2 ಕೋಟಿ ರು. ಅನುದಾನ ಇರುತ್ತದೆ. ಹೆಚ್ಚುವರಿ ಬೇಕಿದ್ದಲ್ಲಿ ಸಹ ಬಿಡುಗಡೆ ಮಾಡಲಾಗುವುದು ಎಂದರು.

ಅತಿವೃಷ್ಟಿ ಸಂದರ್ಭದಲ್ಲಿ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಗ್ನಿಶಾಮಕ ಇಲಾಖೆ‌ ಅವರು ಕಾರ್ಯಾಗಾರ ಆಯೋಜಿಸಬೇಕು ಎಂದು ಡೀಸಿ ಸೂಚನೆ ನೀಡಿದರು.

ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ‌.ಸಿ.ಶಿವಾನಂದಮೂರ್ತಿ ಅಗತ್ಯ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಾ.ನೀ.ನಿ.ನಿ ಅಧೀಕ್ಷಕ ಅಭಿಯಂತರ ರಘುರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ:ಮೋಹನ್ , ಕೆ‌‌.ಎಸ್.ಆರ್.ಟಿ.ಸಿ ಜಿಲ್ಲಾ ನಿಯಂತ್ರಕ ನಾಗರಾಜು ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಳಿನ ತೂಕ ಹೆಚ್ಚಿಸುವ ಸಂಯುಕ್ತ ರಸಗೊಬ್ಬರ ಬಳಸಿ:

ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ಸಲಹೆ

ಕನ್ನಡಪ್ರಭ ವಾರ್ತೆ ನಾಗಮಂಗಲ

ಡಿಎಪಿ ರಸಗೊಬ್ಬರ ಬಳಸುವ ಬದಲಿಗೆ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸುವ ಸಂಯುಕ್ತ ರಸಗೊಬ್ಬರ ಬಳಸಿದಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ತಿಳಿಸಿದ್ದಾರೆ.

ತಾಲೂಕಿನಾದ್ಯಂತ ಉತ್ತಮವಾಗಿ ಮುಂಗಾರು ಪೂರ್ವ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಬೆಳೆಗಳಿಗೆ ಯೂರಿಯಾ ಮತ್ತು ಡಿಎಪಿಯನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಇವುಗಳಲ್ಲಿ ಕೇವಲ ಸಾರಜನಕ ಮತ್ತು ರಂಜಕದ ಅಂಶ ಮಾತ್ರ ಇರುತ್ತದೆ. ಆದರೆ, ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿಲ್ಲ.

ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಯುಕ್ತ ಬಹಳಷ್ಟು ರಸಗೊಬ್ಬರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಶಿಫಾರಸ್ಸಿನಂತೆ ಹಲವು ಬಗೆಯ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬೇಕು ಎಂದಿದ್ದಾರೆ.

ಬೆಳೆಗಳಿಗೆ ಶಿಫಾರಸ್ಸಿನಂತೆ ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಿ, ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸರಿದೂಗಿಸಬಹುದಾಗಿದೆ. ಅಲ್ಲದೆ ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಗೆ ಆದ್ಯತೆ ನೀಡದೆ ಡಿಎಪಿ ರಸಗೊಬ್ಬರಕ್ಕೆ ಪರ್‍ಯಾಯವಾಗಿ ಗಂಧಕ ಒದಗಿಸುವ ಮತ್ತು ಇನ್ನಿತರೆ ರಸಗೊಬ್ಬರಗಳನ್ನೂ ಸಹ ಬಳಸಬಹುದು.

ಸಸ್ಯಗಳ ಬೆಳವಣಿಗೆಗೆ 17 ಪೋಷಕಾಂಶಗಳ ಅಗತ್ಯವಿದೆ. ಗಾಳಿ ಮತ್ತು ನೀರಿನ ಮೂಲಕ ಇಂಗಾಲ, ಜಲಜನಕ ಹಾಗೂ ಆಮ್ಲಜನಕವು ನೈಸರ್ಗಿಕವಾಗಿಯೇ ದೊರೆಯುತ್ತದೆ. ಇನ್ನುಳಿದ 14 ಪೋಷಕಾಂಶಗಳ ಪೈಕಿ ಯಾವುದೇ ಒಂದು ಪೋಷಕಾಂಶದ ಕೊರತೆಯಾದರೂ ಕೂಡ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಪ್ರಮಾಣ ಕುಂಠಿತವಾಗುತ್ತದೆ. ಹಾಗಾಗಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಮಡಿ ಸೇರಿದಂತೆ ಸಾವಯವ ಗೊಬ್ಬರ ಬಳಕೆ ಮಾಡುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.