ಬಂಗಾರಪೇಟೆ: ತಾಲೂಕು ಪಂಚಾಯ್ತಿ ಇಒ ರವಿಕುಮಾರ್ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರು. ಅನುದಾನ ಬಂದಿದ್ದು, ಯಾವ ಕಾಮಗಾರಿಗಳಿಗೆ ಹಣ ಬಳಸಲಾಗಿದೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡುವಂತೆ ಜಿಪಂ ಸಿಇಒಗೆ ದೂರು ನೀಡಿರುವ ಹಿನ್ನೆಲೆ ಇಒ ರವರು ನನಗೆ ಜೀವ ಬೆದರಿಕೆ ಹಾಕಿದ್ದು, ಅವರ ವಿರುದ್ಧ ದೂರು ನೀಡಲಾಗುವುದು ಎಂದು ಸ್ವಾಭಿಮಾನ ರೈತ ಸಂಘದ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಪಂ ಇಒ ರವಿಕುಮಾರ್ ರವರ ಮೂರು ವರ್ಷಗಳ ಅವಧಿಯಲ್ಲಿ ಎಷ್ಟು ಹಣ ಬಂದಿದೆ, ಎಲ್ಲಿ ವೆಚ್ಚ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಜಿಪಂ ಸಿಇಒಗೆ ಮನವಿ ಸಲ್ಲಿಸಿದ್ದೆ, ಅದರಂತೆ ಅವರು ೧೫ ದಿನಗಳ ಸಮಯ ಕೇಳಿದ್ದರು. ಗಡುವು ಮುಗಿದರೂ ವರದಿ ನೀಡದ ಕಾರಣ ಮತ್ತೆ ಜಿಪಂ ಸಿಇಒರನ್ನು ಭೇಟಿ ಮಾಡಲು ಹೋದಾಗ ಅಲ್ಲಿ ಆಕಸ್ಮಿಕವಾಗಿ ಇಒ ರವಿಕುಮಾರ್ ಸಿಕ್ಕಿ ನನ್ನ ಮೇಲೆ ದೂರು ನೀಡುವೆಯಾ, ನೀನೇನು ಸಾಚಾನಾ, ದೂರು ವಾಪಸ್ ಪಡೆಯದಿದ್ದರೆ ನಿನ್ನ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಸಿ ಜೈಲಿಗೆ ಹಾಕುವೆ ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿದರು.

ತಾಪಂಗೆ ವಿವಿಧ ಇಲಾಖೆಗಳ ಬಳಕೆಗೆ ಕೋಟ್ಯಾಂತರ ರು. ಅನುದಾನ ಬಂದಿದೆ, ಅದನ್ನು ಎಲ್ಲಿ, ಯಾವ ಕಾಮಗಾರಿಗೆ ವಿನಿಯೋಗಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಕೋರಲಾಗಿದೆ, ಭ್ರಷ್ಟಾಚಾರದ ಬಗ್ಗೆ ಉಲ್ಲೇಖ ಮಾಡಿಲ್ಲ, ಆದರೂ ಇಒ ರವಿಕುಮಾರ್ ರವರು ೩೫೩ ಕಾಯ್ದೆಯಡಿ ಬಂಧಿಸುವುದಾಗಿ ಬೆದರಿಕೆ ಹಾಕಿ, ನನಗೆ ಜೀವ ಬೆದರಿಕೆ ಹಾಕಿದ್ದು ಅವರ ವಿರುದ್ಧ ಪೊಲೀಸರಿಗೆ ದೂರು ನೀಡುವೆ, ಇದಲ್ಲದೆ ನಾನು ಕೇಳಿರುವ ಮಾಹಿತಿ ನೀಡದಿರುವುದರಿಂದ ಜಿಪಂ ಮುಂದೆ ಪ್ರತಿಭಟನೆ ಮಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.