ಮಳೆಯ ಕೊರತೆಯಿಂದ ತಾಲೂಕು ತೀವ್ರ ಬರಕ್ಕೆ ತುತ್ತಾಗಿದ್ದು ನೀರಾವರಿ ಬೆಳೆಗಳ ರಕ್ಷಣೆಗೆ ಭದ್ರಾ ಮೇಲ್ದಂಡೆಯ ನೀರನ್ನು ತಾಲೂಕಿನ ಕೆರೆಗಳಿಗೆ ಶೀಘ್ರ ಹರಿಸುವಂತೆ ಒತ್ತಾಯಿಸಿ ತಾಲೂಕು ರೈತೋದಯ ಹಸಿರು ಸೇನೆಯ ಅಧ್ಯಕ್ಷ ಯರಮ್ಮನಹಳ್ಳಿ ಕುರಿಮಲ್ಲಪ್ಪ ತಹಸೀಲ್ದಾರ್ ವೈ‌.ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಮಳೆಯ ಕೊರತೆಯಿಂದ ತಾಲೂಕು ತೀವ್ರ ಬರಕ್ಕೆ ತುತ್ತಾಗಿದ್ದು ನೀರಾವರಿ ಬೆಳೆಗಳ ರಕ್ಷಣೆಗೆ ಭದ್ರಾ ಮೇಲ್ದಂಡೆಯ ನೀರನ್ನು ತಾಲೂಕಿನ ಕೆರೆಗಳಿಗೆ ಶೀಘ್ರ ಹರಿಸುವಂತೆ ಒತ್ತಾಯಿಸಿ ತಾಲೂಕು ರೈತೋದಯ ಹಸಿರು ಸೇನೆಯ ಅಧ್ಯಕ್ಷ ಯರಮ್ಮನಹಳ್ಳಿ ಕುರಿಮಲ್ಲಪ್ಪ ತಹಸೀಲ್ದಾರ್ ವೈ‌.ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈಗಾಗಲೇ 800ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿ ಹೋಗಿವೆ. ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಮೇವು ನೀರಿಲ್ಲದೆ ಪರದಾಟ ಶುರುವಾಗಿದೆ. ಭದ್ರಾ ಮೇಲ್ದಂಡೆ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ಕೂಡಲೇ ಪಾವಗಡ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು. ಸೋಲಾರ್ ಕಂಪನಿಗಳು ದಾರಿಗಳನ್ನು ಮುಚ್ಚಿ ಒತ್ತುವರಿ ಮಾಡಿಕೊಂಡು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಸಂಬಂಧಪಟ್ಟ ಸರ್ವೆಯರ್‌ಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಕ್ರಮ-ಸಕ್ರಮ ಯೋಜನೆಯಡಿ ಫಾರಂ ನಂ. 50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿ 40 ವರ್ಷ ಕಳೆದರೂ ಇನ್ನೂ ಜಮೀನು ಮಂಜೂರಾಗಿಲ್ಲ. ಕೂಡಲೇ ಜಮೀನು ಮಂಜೂರು ಮಾಡಬೇಕು. ಕಡಲೆಕಾಯಿ, ತೊಗರಿ, ರಾಗಿ, ಹೊಂಬ್ಯಾಕೊ ಸೇರಿದಂತೆ ಎಲ್ಲ ಬೆಳೆಗಳು ನೆಲಕಚ್ಚಿದ್ದು, ಕೂಡಲೇ ಬೆಳೆ ನಷ್ಟ ಎಂದು ಘೋಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು. ಇದೇ ವೇಳೆ ತಾಲೂಕು ರೈತೋದಯ ಹಸಿರು ಸೇನೆಯ ಪದಾಧಿಕಾರಿಗಳಿದ್ದರು.

ಪೋಟೋ : ಭದ್ರಾ ಮೇಲ್ದಂಡೆಯ ನೀರನ್ನು ಪಾವಗಡ ತಾಲೂಕಿನ ಕೆರೆಗಳಿಗೆ ಶೀಘ್ರ ಹರಿಸುವಂತೆ ಒತ್ತಾಯಿಸಿ ತಾಲೂಕು ರೈತೋದಯ ಹಸಿರು ಸೇನೆಯ ಅಧ್ಯಕ್ಷ ಯರಮ್ಮನಹಳ್ಳಿ ಕುರಿಮಲ್ಲಪ್ಪ ತಹಸೀಲ್ದಾರ್ ವೈ‌.ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.