ಸಾರಾಂಶ
ಗವಿಸಿದ್ದಪ್ಪನ ಕೊಲೆಯಿಂದ ನೋವಾಗಿದೆ. ನಿಮ್ಮ ಹಿಂದೆ ಸಮಾಜ, ಮಠವಿರಲಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ಈ ನಿಟ್ಟಿನಲ್ಲಿಯೇ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನೇತೃತ್ವದಲ್ಲಿ ಆ. ೧೧ರಂದು ಪ್ರತಿಭಟನೆ ನಡೆಯಲಿದೆ. ನಿಮಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಶ್ರೀಗಳು ಧೈರ್ಯ ತುಂಬಿದರು.
ಕೊಪ್ಪಳ:
ಪ್ರೇಮ ಪ್ರಕರಣದಲ್ಲಿ ಕೊಲೆಯದ ನಗರದ ಗವಿಸಿದ್ದಪ್ಪ ನಾಯಕ ಮನೆಗೆ ಶನಿವಾರ ಹರಿಹರದ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಗವಿಸಿದ್ದಪ್ಪನ ಕೊಲೆಯಿಂದ ನೋವಾಗಿದೆ. ನಿಮ್ಮ ಹಿಂದೆ ಸಮಾಜ, ಮಠವಿರಲಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ಈ ನಿಟ್ಟಿನಲ್ಲಿಯೇ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನೇತೃತ್ವದಲ್ಲಿ ಆ. ೧೧ರಂದು ಪ್ರತಿಭಟನೆ ನಡೆಯಲಿದೆ. ನಿಮಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಶ್ರೀಗಳು ಧೈರ್ಯ ತುಂಬಿದರು.
ಮೃತನ ತಂದೆ ನಿಂಗಜ್ಜ, ತಾಯಿ ದೇವಮ್ಮ, ಸಹೋದರಿಯರಾದ ಅನ್ನಪೂರ್ಣ, ದುರ್ಗಮ್ಮ, ಉಮಾ, ಚಿಕ್ಕಪ್ಪ ಯಮನೂರಪ್ಪ ಅವರಿಗೆ ಧೈರ್ಯದಿಂದ ಇರುವಂತೆಯೂ ಹೇಳಿದರು.ಈ ವೇಳೆ ಮಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಯುವ ಘಟಕದ ಜಿಲ್ಲಾಧ್ಯಕ್ಷ ರವಿ ವಕೀಲರು, ಮುಖಂಡರಾದ ಟಿ. ರತ್ನಾಕರ, ಬಿಲ್ಗಾರ್ ನಾಗರಾಜ, ರಾಮಣ್ಣ ನಾಯಕ, ಹನುಮೇಶ ನಾಯಕ, ಮಂಜುನಾಥ ಗೊಂಡಬಾಳ, ಕರಿಯಪ್ಪ, ಚನ್ನಪ್ಪ, ಹನುಮಂತಪ್ಪ, ಶಿವರಡ್ಡಿ ವಕೀಲ, ಗಂಗಾವತಿ ಜೋಗದ ವೀರಭದ್ರಪ್ಪ, ನಾರಾಯಣಪ್ಪ ನಾಯಕ, ಶುಕ್ರಾಜ್ ತಾಳಕೇರಿ, ಮಾನಪ್ಪ ಇದ್ದರು.ಶ್ರೀಗಳಿಂದ ಗೌಪ್ಯ ಸಭೆ:
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಗೌಪ್ಯ ಸಭೆ ನಡೆಯಿತು. ಸೋಮವಾರ ನಡೆಯುವ ಬೃಹತ್ ಪ್ರತಿಭಟನೆಯ ಕುರಿತು ಚರ್ಚಿಸಲಾಯಿತು. ಸಚಿವ ಶಿವರಾಜ ತಂಗಡಗಿ ಕರೆ ಮಾಡಿದ ಶ್ರೀಗಳು ಘಟನೆ ಕುರಿತು ಮಾತನಾಡಿದರು. ಕುಟುಂಬಕ್ಕೆ ಸೂಕ್ತ ಪರಿಹಾರ, ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿ ಸಚಿವರು ಭರವಸೆ ನೀಡಿದರು. ಕುಟುಂಬಕ್ಕೆ ಸಮಾಜದ ಮುಖಂಡರು ಬೆನ್ನೆಲುಬಾಗಿ ನಿಲ್ಲುವಂತೆ ಶ್ರೀಗಳು ಸಲಹೆ ನೀಡಿದರು.