ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದಲ್ಲಿ ಕೆಎಸ್ಆರ್ಟಿಸಿ ನೂತನ ವಿಭಾಗೀಯ ಕಚೇರಿ ಹಾಗೂ ನಗರ ಸಾರಿಗೆಗೆ ಶಾಸಕ ಕೆ.ಎನ್. ರಾಜಣ್ಣ ಚಾಲನೆ ನೀಡಿದರು.ಸೋಮವಾರ ಪಟ್ಟಣದ ಶಿರಾ ಗೇಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಭಾಗೀಯ ಕಚೇರಿ ಪ್ರಾರಂಭದಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ದೂರದ ನಗರ ಪ್ರದೇಶಗಳಿಗೆ ತೆರಳುವ ಅಗತ್ಯ ಕಡಿಮೆಯಾಗಲಿದ್ದು, ವಿವಿಧ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ದೊರೆಯಲಿವೆ. ಇದರಿಂದ ಜನರ ಸಮಯ ಮತ್ತು ಹಣ ಉಳಿತಾಯವಾಗುವ ಜೊತೆಗೆ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಜನ ಸ್ನೇಹಿಯಾಗಿಸಲು ಈ ಕಚೇರಿ ಸಹಕಾರಿ ಎಂದರು.
ಪ ಟ್ಟಣದ ವಿವಿಧ ಭಾಗಗಳು ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ನಡುವೆ ಸುಗಮ ಸಂಚಾರಕ್ಕೆ ನಗರ ಸಾರಿಗೆ ನೆರವಾಗಲಿದೆ. ನೂತನ ಕಚೇರಿ ವ್ಯಾಪ್ತಿಗೆ ಕೊರಟಗೆರೆ, ಪಾವಗಡ, ಶಿರಾ ಹಾಗೂ ಮಧುಗಿರಿ ತಾಲೂಕುಗಳು ಒಳಪಟ್ಟಿವೆ. ಇದು ಸಾರ್ವಜನಿಕರ ಹಿತ ದೃಷ್ಠಿಯಿಂದ ಹೊಸ ಹೆಜ್ಜೆ. ಕೆಎಸ್ಆರ್ಟಿಸಿ ಡಿಪೋ ಬಳಿ ಎರೆಡುವೂರೆ ಎಕರೆ ಜಾಗ ಮೀಸಲಿಟ್ಟಿದ್ದು ವಿಭಾಗೀಯ ಕಚೇರಿ ಹಾಗೂ ಉಗ್ರಾಣಕ್ಕಾಗಿ ಅಲ್ಲಿಯೇ ಸ್ವಂತ ಕಟ್ಟಡ ಕಟ್ಟಲಾಗುವುದು. ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಕರೆಸಿ ಭೂಮಿ ಪೂಜೆ ನೆರವೇರಿಸುವುದಾಗಿ ರಾಜಣ್ಣ ತಿಳಿಸಿದರು. ತುಮಕೂರು ಬಿಟ್ಟರೆ ಎಲ್ಲೂ ಸಹ ನಗರ ಸಾರಿಗೆ ಇಲ್ಲ. ನಮ್ಮಲ್ಲಿ ಪ್ರಾರಂಭಿಸಲಾಗಿದೆ ವಿಭಾಗೀಯ ಕೇಂದ್ರ ಮತ್ತು ನಗರ ಸಾರಿಗೆ ಮಂಜೂರು ಮಾಡಿದ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಆರ್ಟಿಸಿ ಅಧ್ಯಕ್ಷ ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷಾ ಮತ್ತು ಕೇಂದ್ರ ವಿಭಾಗದ ವ್ಯವಸ್ಥಾಪಕ ಮಂಜುನಾಥ್ ಅವರನ್ನು ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ತುಮಕೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಬಸವರಾಜು, ಮಧುಗಿರಿ ವಿಭಾಗೀಯ ನಿಯಂತ್ರಣ ಅಧಿಕಾರಿ ನಾಗೇಂದ್ರ, ಡಿಪೋ ಮ್ಯಾನೇಜರ್ ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಆದಿನಾರಾಯಣ ರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷರಾದ ಲಾಲಾಪೇಟೆ ಮಂಜುನಾಥ್, ಎಂ.ಕೆ. ನಂಜುಂಡಯ್ಯ, ಎನ್. ಗಂಗಣ್ಣ, ಕೆ. ಪ್ರಕಾಶ್, ಮಹಮ್ಮದ್ ಆಯುಬ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ,ಮುಖಂಡರಾದ ತುಂಗೋಟಿ ರಾಮಣ್ಣ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.