ಇಂದು ರಾಜಯೋಗಿನಿ ಬ್ರಹ್ಮಕುಮಾರಿ ಶಿವಾನಿ ಉಪನ್ಯಾಸ

| Published : Feb 01 2024, 02:04 AM IST

ಸಾರಾಂಶ

ಒತ್ತಡದಲ್ಲಿರುವ ಅನೇಕರಿಗೆ ಸನ್ಮಾರ್ಗ ತೋರುವ ವಿಶೇಷ ಉಪನ್ಯಾಸ ಸೇವೆಯನ್ನು ಶಿವಾನಿ ಈವರೆಗೂ ಮಾಡುತ್ತಾ ಬಂದಿದ್ದಾರೆ. ಅಮೇರಿಕಾ, ಆಫ್ರಿಕಾ, ಅರಬ್ ಮತ್ತಿತರೆ ದೇಶಗಳಲ್ಲೂ ತಮ್ಮ ಮಹೋನ್ನತ ಸೇವೆ ನೀಡುತ್ತಿದ್ದಾರೆ ಎಂದು ಬ್ರಹ್ಮಕುಮಾರಿ ಲೀಲಾಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸುಖ, ಶಾಂತಿಯುತ ಜೀವನಕ್ಕಾಗಿ ಸಕಾರಾತ್ಮಕ ಚಿಂತನೆ ಮಾಡುವ ಕಲೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸ ನೀಡಿ, ಹೆಸರಾದ ರಾಜಯೋಗಿನಿ ಬ್ರಹ್ಮಕುಮಾರಿ ಶಿವಾನಿ ಫೆ.1ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ದಾವಣಗೆರೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಎಸ್ಸೆಸ್ ಬಡಾವಣೆ ಎ ಬ್ಲಾಕ್‌ನ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಅಂದು ಸಂಜೆ 5.30ರಿಂದ ರಾತ್ರಿ 8ರವರೆಗೆ ರಾಜಯೋಗಿನಿ ಬ್ರಹ್ಮಕುಮಾರಿ ಶಿವಾನಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸೇವಾ ಸಂಸ್ಥೆಯಾದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಳೀಯ ಶಾಖೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 5 ಸಾವಿರಕ್ಕೂ ಅಧಿಕ ಜನರು ಉಪನ್ಯಾಸದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಂಸ್ಥೆಯ ಹುಬ್ಬಳ್ಳಿ ವಲಯ ನಿರ್ದೇಶಕರಾದ ರಾಜಯೋಗಿ ಬ್ರಹ್ಮಕುಮಾರ ಡಾ.ಬಸವರಾಜ ರಾಜಋಷಿ ಸಾನಿಧ್ಯ ದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಹುಬ್ಬಳ್ಳಿ ವಲಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾ ಜಿ ಅಧ್ಯಕ್ಷತೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಬಿ.ಪಿ.ಹರೀಶ, ಕೆ.ಎಸ್.ಬಸವಂತಪ್ಪ, ಬಸವರಾಜ ವಿ.ಶಿವಗಂಗಾ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್‌, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್, ಉಪ ವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ತಹಸೀಲ್ದಾರ್ ಡಾ.ಅಶ್ವತ್ಥ್‌, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ, ಮೇಯರ್ ಬಿ.ಎಚ್‌.ವಿನಾಯಕ ಪೈಲ್ವಾನ್, ದಾವಿವಿ ಕುಲಪತಿ ಡಾ.ಬಿ.ಡಿ.ಕುಂಬಾರ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ, ಗ್ರಾಸಿಂ ಇಂಡಸ್ಟ್ರೀಸ್ ಹಿರಿಯ ಉಪಾಧ್ಯಕ್ಷ ಅಜಯ್ ಗುಪ್ತ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಅವರು ತಿಳಿಸಿದರು.

ಮೂಲತಃ ದೆಹಲಿಯವರಾದ ರಾಜಯೋಗಿನಿ ಶಿವಾನಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರು. ಪುಣೆಯ ಭಾರತೀಯ ವಿದ್ಯಾಪೀಠದಲ್ಲಿ ಎರಡು ವರ್ಷ ಬೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ ಅನೇಕ ವರ್ಷದಿಂದ ರಾಜ ಯೋಗ ಅಧ್ಯಯನ ಮಾಡುತ್ತಿದ್ದು, ಈಗ ರಾಜಯೋಗ ಶಿಕ್ಷಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸ ನೀಡುತ್ತಿ ದ್ದಾರೆ. ಕಳೆದ 16 ವರ್ಷದಿಂದ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಕುರಿತಂತೆ ದೇಶ, ವಿದೇಶದಲ್ಲಿ ಹಲವಾರು ಸಭಾ ಕಾರ್ಯ ಕ್ರಮ, ದೂರದರ್ಶನದಲ್ಲಿ ಉಪನ್ಯಾಸ ನೀಡುತ್ತಾ ಬಂದಿದ್ದಾರೆ ಎಂದು ಅವರು ವಿವರಿಸಿದರು.

ಅವೇಕ್‌ನಿಂದ್, ಪೀಸ್ ಆಫ್ ಮೈಂಡ್‌, ಆಸ್ತಾ ಟಿವಿ, ಝೀ ಟಿವಿ ಸೇರಿದಂತೆ ಅನೇಕ ಕಿರು ತೆರೆಗಳಲ್ಲಿ ಶಿವಾನಿಯವರ ಉಪ ನ್ಯಾಸ ಕಾರ್ಯಕ್ರಮ ಪ್ರಸಾರವಾಗುತ್ತಿರುತ್ತವೆ.ಒತ್ತಡದಲ್ಲಿರುವ ಅನೇಕರಿಗೆ ಸನ್ಮಾರ್ಗ ತೋರುವ ವಿಶೇಷ ಉಪನ್ಯಾಸ ಸೇವೆಯನ್ನು ಶಿವಾನಿ ಮಾಡುತ್ತಾ ಬಂದಿದ್ದಾರೆ. ಅಮೇರಿಕಾ, ಆಫ್ರಿಕಾ, ಅರಬ್ ಮತ್ತಿತರೆ ದೇಶಗಳಲ್ಲೂ ತಮ್ಮ ಮಹೋನ್ನತ ಸೇವೆ ನೀಡುತ್ತಿದ್ದಾರೆ. ಒತ್ತಡ ಮುಕ್ತ ಜೀವನ ಶೈಲಿ, ನಾಯಕತ್ವ ಕೌಶಲ್ಯಗಳು, ಭಾವನಾತ್ಮಕ ಬುದ್ಧಿವಂತಿಕೆ, ಸಕಾರಾತ್ಮಕ ಚಿಂತನಾ ಕಲೆ, ಜೀವನ ಮತ್ತು ಜೀವಂತ ಮೌಲ್ಯಗಳು, ಆಂತರಿಕ ಶಕ್ತಿ ಗುರುತಿಸುವುದು, ಸ್ವನಿರ್ವಹಣೆ, ಸಂಬಂಧಗಳಲ್ಲಿ ಸಾಮರಸ್ಯ, ರಾಗಯೋಗದ ಪ್ರಾಯೋಗಿಕ ವಿದಾನಗಳು ಇತ್ಯಾದಿ ವಿಷಯಗಳನ್ನು ತುಂಬಾ ಸರಳವಾಗಿ, ಸುಲಭವಾಗಿ ಜನರಿಗೆ ಅರ್ಥವಾಗುವಂತೆ, ಜನ ಮನ ತಲುಪಂತೆ ಹಾಗೂ ಸಕಾತಾತ್ಮಕ ಬದಲಾವಣೆ ತರುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸಂಸ್ಥೆಯ ದಾಂಡೇಲಿ ಶಾಖೆಯ ಸಂಚಾಲಕಿ ಗೀತಕ್ಕ, ಇ.ಎಂ.ಮಂಜುನಾಥ, ಸುರೇಶ, ಕಾಶಪ್ಪ ಇತರರು ಇದ್ದರು.