ದೇಶದ ಸರ್ವಾಂಗಿಣ ಅಭಿವೃದ್ಧಿಯು ಗ್ರಾಮೀಣ ಅಭಿವೃದ್ಧಿ ಅವಲಂಬಿಸಿದೆ. ಈ ನಿಟ್ಟಿನಲ್ಲಿ ಒಬ್ಬ ಪ್ರಧಾನಿಯಾಗಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದು ಗ್ರಾಮೀಣ ಮಟ್ಟದ ಬಡ ವರ್ಗದ ಜನರಿಗೆ ಆಡಳಿತ ನಡೆಸುವ ಅಧಿಕಾರ ಕೊಟ್ಟವರು ರಾಜೀವ್ ಗಾಂಧಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾಕ್ರಾಂತಿಗೆ ನಾಂದಿಯಾಗುವಂತೆ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಆಧುನಿಕ ಭಾರತದ ರೂವಾರಿಯಾಗಿದ್ದರು. ಭಾರತ ವಿಶ್ವದ ಆಧುನಿಕ ತಂತ್ರಜ್ಞಾನ ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರವಾಗುವಲ್ಲಿ ಅವರ ಆಡಳಿತಾತ್ಮಕ ದೂರದೃಷ್ಟಿತ್ವವೇ ಕಾರಣವಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಭಾರತ ರತ್ನ ದಿ. ರಾಜೀವ್ ಗಾಂಧಿ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶದ ಸರ್ವಾಂಗಿಣ ಅಭಿವೃದ್ಧಿಯು ಗ್ರಾಮೀಣ ಅಭಿವೃದ್ಧಿ ಅವಲಂಬಿಸಿದೆ. ಈ ನಿಟ್ಟಿನಲ್ಲಿ ಒಬ್ಬ ಪ್ರಧಾನಿಯಾಗಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದು ಗ್ರಾಮೀಣ ಮಟ್ಟದ ಬಡ ವರ್ಗದ ಜನರಿಗೆ ಆಡಳಿತ ನಡೆಸುವ ಅಧಿಕಾರ ಕೊಟ್ಟವರು ರಾಜೀವ್ ಗಾಂಧಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾಕ್ರಾಂತಿಗೆ ನಾಂದಿಯಾಗುವಂತೆ ಮಾಡಿದ್ದಾರೆ ಎಂದು ಹೇಳಿದರು.ಸ್ಥಳೀಯ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣಗೊಳಿಸಿ ರಾಷ್ಟ್ರದ ದಲಿತರು, ಹಿಂದುಳಿದವರು ಹಾಗೂ ಜನಸಾಮಾನ್ಯರಿಗೆ ಶಾಶ್ವತವಾಗಿ ಮೀಸಲಾತಿ ಕಲ್ಪಿಸಿದ ನಾಯಕ ರಾಜೀವ್‌ಗಾಂಧಿ ೧೮ ವರ್ಷದ ಯುವ ವರ್ಗಕ್ಕೆ ಮತದಾನದ ಅಧಿಕಾರವನ್ನು ನೀಡಿದ ಅವರು, ದೇಶದ ರಾಜಕೀಯ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಎಂದಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.ರಾಜೀವ್ ಗಾಂಧಿ ಹುತಾತ್ಮ:

ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ದೇಶದ ಅಖಂಡತೆ ಮತ್ತು ಸೈದ್ಧಾಂತಿಕ ಬದ್ಧತೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ರಾಜೀವ್ ಗಾಂಧಿ ಹುತಾತ್ಮರಾದರು. ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿಯೂ ಅವರ ನೆನಪು ಅಚ್ಚಳಿಯದೆ ಉಳಿದಿದೆ. ಪಂಚಾಯತ್ ರಾಜ್, ಟೆಲಿಕಾಂ ಮತ್ತು ಐಟಿ ಕ್ರಾಂತಿ ಬಲಪಡಿಸುವುದು ಮತ್ತು ನಿರಂತರ ಶಾಂತಿ ಒಪ್ಪಂದಗಳಂತಹ ಬಹು ಮಧ್ಯಸ್ಥಿಕೆಗಳ ಮೂಲಕ ರಾಜೀವ್‌ಗಾಂಧಿ ಭಾರತವನ್ನು ಪರಿವರ್ತಿಸಿದರು ಎಂದರು.ರಾಜೀವ್‌ಗಾಂಧಿ ಹತ್ಯೆಯಾಗದೆ ನಮ್ಮೊಂದಿಗೆ ಇದ್ದರೆ ದೇಶ ಇನ್ನಷ್ಟು ಬಲಿಷ್ಠವಾಗುವ ಜತೆಗೆ ಅಭಿವೃದ್ಧಿ ಹೊಂದಿದ ಭಾರತ ಕಾಣಲು ಸಾಧ್ಯವಾಗುತ್ತಿತ್ತು. ದುರಾದೃಷ್ಟ ಸಂಗತಿ ಇಂಥ ಮಹಾ ಮೇಧಾವಿ ನಾಯಕನನ್ನು ಕಳೆದುಕೊಂಡಿರುವುದು ದೇಶದ ದೊಡ್ಡ ದುರಂತ. ನೆಹರು ಹಾಗೂ ಇಂದಿರಾಗಾಂಧಿ ಪ್ರಧಾನಿಯಾದಾಗ ಭಾರತ ಹಲವಾರು ಯುದ್ಧಗಳನ್ನು ಎದುರಿಸಿ ವಿಜಯಶಾಲಿಯಾಗಿದೆ. ಆದರೆ ಅಂದಿನ ಸಮಯದಲ್ಲಿ ಹೆಚ್ಚಾಗಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳು ಇಲ್ಲದಿರುವುದರಿಂದ ಈ ವಿಷಯ ಜನತೆಗೆ ಸಮರ್ಪಕವಾಗಿ ಮುಟ್ಟಿಲ್ಲ ಎಂದು ಅವರು ಹೇಳಿದರು.ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ವೈ. ಶಿವಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ವಿಭಾಗದ ಜಿಲ್ಲಾ ಅಧ್ಯಕ್ಷ ಎನ್. ಅಂಬರೀಷ್, ಮುಖಂಡರಾದ ಸುರೇಶ್, ಕುರಿಗಳ ರಮೇಶ್, ಫಿರೋಜ್ ಖಾನ್, ವೆಂಕಟಪತಿಯಪ್ಪ, ಕಠಾರಿಪಾಳ್ಯ ಗಂಗಣ್ಣ ಅಮರನಾಥ್, ರಾಜೇಶ್, ವೀರೇಂದ್ರ ಪಾಟೀಲ್, ಚಿನ್ನಾಪುರ ನಾರಾಯಣಸ್ವಾಮಿ, ಕೋಟೆ ಶ್ರೀನಿವಾಸ್ ಇದ್ದರು.

-----

೨೧ಕೆಎಲ್‌ಆರ್-೨ ಕೋಲಾರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಭಾರತ ರತ್ನ ದಿ.ರಾಜೀವ್ ಗಾಂಧಿ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು.