ಖುದ್ದು ಭೇಟಿಯಾಗಿ ಕೊರಗರ ಸಮಸ್ಯೆ ಪರಿಹಾರ: ರಾಜೇಶ್ ನಾಯ್ಕ್‌ ಭರವಸೆ

| Published : Jan 14 2025, 01:00 AM IST

ಖುದ್ದು ಭೇಟಿಯಾಗಿ ಕೊರಗರ ಸಮಸ್ಯೆ ಪರಿಹಾರ: ರಾಜೇಶ್ ನಾಯ್ಕ್‌ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ನಿವೇಶನ, ಹಕ್ಕುಪತ್ರ ಸಹಿತ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಕೊರಗ ಸಮುದಾಯದ ಕುಟುಂಬಗಳನ್ನು ಅಧಿಕಾರಿಗಳೊಂದಿಗೆ ಖುದ್ದು ಭೇಟಿ ಮಾಡಿ ಪರಿಶೀಲಿಸಿ, ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ನಿವೇಶನ, ಹಕ್ಕುಪತ್ರ ಸಹಿತ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಕೊರಗ ಸಮುದಾಯದ ಕುಟುಂಬಗಳನ್ನು ಅಧಿಕಾರಿಗಳೊಂದಿಗೆ ಖುದ್ದು ಭೇಟಿ ಮಾಡಿ ಪರಿಶೀಲಿಸಿ, ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೊರಗ ಸಮುದಾಯದ ಕುಂದುಕೊರತೆಗಳ‌ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆರಂಭದಲ್ಲಿ ಕೊರಗ ಸಮುದಾಯದ ಸಮಸ್ಯೆಗಳನ್ನು ಕೊರಗ ಸಮುದಾಯದ ಮುಖಂಡ ಕೆ.ಪುತ್ರನ್ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಿಡುವ ಶೇ.25 ರ ಅನುದಾನದಲ್ಲಿ ಮೂರನೇ ಒಂದು‌ ಭಾಗವನ್ನು‌ಕೊರಗ ಸಮುದಾಯಕ್ಕೆ ಮೂಲಭೂತ ಸೌಕರ್ಯ ಒದಗಿಸಲು ವಿನಿಯೋಗಿಸಬೇಕು, ಜಾಗವಿಲ್ಲದೆ ಸಂಕಷ್ಟದಲ್ಲಿರುವ ಕೊರಗ ಸಮುದಾಯದ ಕುಟುಂಬಗಳಿಗೆ ಜಮೀನು‌ ಸೇರಿ, ಹಕ್ಕುಪತ್ರ ಒದಗಿಸಲು ಆಡಳಿತ ಗಮನಹರಿಸಬೇಕೆಂದು ಸಭೆಯ ಗಮನ ಸೆಳೆದರು. ಪುರಸಭಾ ವ್ಯಾಪ್ತಿಯಲ್ಲಿ ಕೊರಗ ಸಮುದಾಯ ಭವನ ಸ್ಥಾಪನೆಗೆ ಅರ್ಜಿ ಸಲ್ಲಿಸಲಾಗಿದೆ, ಈ‌ ಕುರಿತು ಹೆಚ್ಚಿನ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

ಈಗ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನ ಸಾಲದು, ಹಂಚಿನ‌ ಮನೆಯ ಯೋಜನೆಯನ್ನು ಕೈ ಬಿಟ್ಟು ಟೇರೆಸ್ ಮನೆ ನಿರ್ಮಾಣದ ಯೋಜನೆ ರೂಪಿಸುವಂತೆ ಒತ್ತಾಯಿಸಿದರು.ಕನ್ಯಾನದ ಸುಂದರಿ ಮಾತನಾಡಿ, ಜಮೀನಿನ ಹಕ್ಕು ಪತ್ರ ಸಮಸ್ಯೆ ಇರುವುದರಿಂದ ಉದ್ಯೋಗ ಖಾತ್ರಿ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ, ಈ ಬಗ್ಗೆ ಗಮನಹರಿಸಿ ಎಂದು ಒತ್ತಾಯಿಸಿದರು.

ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು. ಸಮಾಜ‌ ಕಲ್ಯಾಣಾಧಿಕಾರಿ ಜಯಶ್ರೀ ವಂದಿಸಿದರು.