ಸಾರಾಂಶ
ಗುರು ದತ್ತಾತ್ರೇಯಪೀಠ ಬಾಬಾಬುಡನ್ ಗಿರಿಯಲ್ಲಿ ರಾಮತಾರಕ ಹೋಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡದ ಕಾರಣಕ್ಕೆ ವಿಶ್ವಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಗುರು ದತ್ತಾತ್ರೇಯಪೀಠ ಬಾಬಾಬುಡನ್ ಗಿರಿಯಲ್ಲಿ ರಾಮತಾರಕ ಹೋಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡದ ಕಾರಣಕ್ಕೆ ವಿಶ್ವಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ದತ್ತಪೀಠಕ್ಕೆ ತೆರಳಿದ್ದ ವಿಶ್ವಹಿಂದೂ ಪರಿಷತ್- ಬಜರಂಗದಳದ ಕಾರ್ಯಕರ್ತರು ಅಲ್ಲಿ ರಾಮತಾರಕ ಹೋಮ ನಡೆಸಲು ಉದ್ದೇಶಿಸಿದ್ದರು. ಆದರೆ, ಪೀಠದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಆವರಣದ ಗೇಟ್ಗೆ ಪೊಲೀಸರು ಬೀಗ ಹಾಕಿ ಹೋಮ ನಡೆಸಲು ಅವಕಾಶವಿಲ್ಲ ಎಂದು ತಡೆದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ, ದತ್ತಪೀಠದಲ್ಲಿ ಅರ್ಚಕರಿಂದ ಪೂಜೆ ನಡೆಯುತ್ತಿದೆ. ಅದನ್ನು ಹೊರತುಪಡಿಸಿ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಇದರಿಂದ ಕೆರಳಿದ ಕಾರ್ಯಕರ್ತರು ಡೀಸಿ ಕಚೇರಿಗೆ ಆಗಮಿಸಿ, ಕಚೇರಿಯ ಬಾಗಿಲಲ್ಲೇ ಹೋಮ ಕುಂಡ ನಿರ್ಮಿಸಿ, ಸಾಂಕೇತಿಕವಾಗಿ ಹೋಮ ನೆರವೇರಿಸಿದರು. ಮುಖ್ಯಮಂತ್ರಿ, ರಾಜ್ಯ ಸರ್ಕಾರ, ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಒಂದು ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಮತ್ತೆ ಕೆಲವರು ದತ್ತಪೀಠ ಚಲೋ ಕಾರ್ಯಕ್ರಮಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಅವರೆಲ್ಲರನ್ನೂ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.