ಸಾರಾಂಶ
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾನೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಶ್ರೀರಾಮನ ಪ್ಲೆಕ್ಸ್ ಹಾಗೂ ಬಂಟಿಂಗ್ಸ್ ನಿಂದ ಅಲಂಕಾರಗೊಳಿಸಿರುವುದು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದರೆ ಇತ್ತ ಕಾಫಿ ನಾಡಿನಲ್ಲಿ ರಾಮ ನಾಮ ಸ್ಮರಣೆ ನಡೆದಿದೆ.ಜಿಲ್ಲೆಯ ರಾಮ ದೇಗುಲಗಳು ವಿದ್ಯುತ್ ದೀಪಗಳು ಹಾಗೂ ಭಗವದ್ವಜಗಳಿಂದ ಶೃಂಗಾರ ಮಾಡಲಾಗಿದೆ. ಪ್ರಮುಖ ರಸ್ತೆಗಳು, ಬಂಟಿಂಗ್ಸ್, ಬ್ಯಾನರ್ಗಳಿಂದ ರಾರಾಜಿಸುತ್ತಿವೆ. ಎತ್ತ ನೋಡಿದರೂ ಇದೇ ವಾತಾವರಣ, ಯುವಕರು ಜೈ ಶ್ರೀರಾಮ ಘೋಷಣೆ ಹಾಕುತ್ತಿದ್ದರೆ, ಇತ್ತ ವಯೋವೃದ್ಧರು, ದೇವಾಲಯಗಳಲ್ಲಿ ಮಾತ್ರ ಅಲ್ಲ, ತಮ್ಮ ಸರಿಕರೊಂದಿಗೆ ಮಾತನಾಡುವಾಗ ಜೈ ಶ್ರೀರಾಮ್ ಎಂದೇ ಮಾತು ಆರಂಭಿಸುವ ಮೂಲಕ ರಾಮ ಸ್ಮರಣೆ ವಾತಾವರಣ ಕಾಫಿ ನಾಡಿನಾದ್ಯಂತ ಆವರಿಸಿಕೊಂಡಿದೆ.
ಶಾರದಾಂಭೆ ಸನ್ನಿಧಿಯಲ್ಲಿ ಆಯೋಧ್ಯೆ ರಾಮಮಂದಿರದ ಕಲಾಕೃತಿ. ದೇವಸ್ಥಾನದ ಯಾಗ ಮಂಟಪದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ತುಮಕೂರು ಮೂಲದ ವಿನಯ್ ರಾಮ್ ಅವರಿಂದ ತಯಾರಾದ ಕಲಾಕೃತಿಯಾಗಿದೆ. ರಾಮ, ಲಕ್ಷ್ಮಣ, ಸೀತೆಯ ಸಣ್ಣ ವಿಗ್ರಹ ಇದಾಗಿದ್ದು, ಶೃಂಗೇರಿಯ ಯಾಗ ಮಂಟಪದಲ್ಲಿ 5 ದಿನ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.ಕಡೂರು ಪಟ್ಟಣದ ಅಯ್ಯಪ್ಪಸ್ವಾಮಿ ದೇಗುಲದ ಅರ್ಚಕ ಪರಮೇಶ್ವರನ್ ಸ್ವಾಮಿ ಅವರು 2007 ರಿಂದ ಈವರೆಗೆ 1.20 ಕೋಟಿ ಸಲ ರಾಮ ನಾಮ ಜಪ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. 19 ಪುಸ್ತಕಗಳಲ್ಲಿ ರಾಮ ನಾಮವನ್ನು ಪರಮೇಶ್ವರನ್ ಸ್ವಾಮಿ ಬರೆದಿದ್ದಾರೆ. ಇದಕ್ಕಾಗಿ ಬಳಕೆ ಮಾಡಲಾಗಿರುವ 19ನೋಟ್ ಬುಕ್ಗಳು ಹಾಗೂ ಪೆನ್ನುಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ತೋಗರಿಹಂಕಲ್ ಗ್ರಾಮದಲ್ಲಿ ಶುಭಕೋರಿ ಸುಮಾರು 100 ಅಡಿ ಅಗಲ 10 ಅಡಿ ಎತ್ತರ ದ ಬೃಹತ್ ಪ್ಲೆಕ್ಸ್ ಹಾಕಲಾಗಿದೆ. ಮಾಜಿ ಸಚಿವ ಸಿ.ಟಿ. ರವಿ ಅವರು ಪ್ಲೆಕ್ಸ್ ಉದ್ಘಾಟಿಸಿ ಜೈ ಶ್ರೀರಾಮ್ ಘೋಷಣೆ ಹಾಕಿದರು.