ಸಾರಾಂಶ
ಶ್ರೀ ರಾಮಕೃಷ್ಣರ ಚಿಂತನೆಯಿಂದ ಭಕ್ತಿಯ ಜಲ ಉದ್ಭವಿಸಿ ಶಾಂತಿ ಮೂಡಲಿದೆ. ಇಂದು ನಮ್ಮ ಅಶಾಂತಿಗೆ ಕಾರಣವಾದ ಜಾತಿ, ಮತ ಸೇರಿದಂತೆ ಅನೇಕ ಕಲಹಗಳು ದೂರಾಗಬೇಕಾದರೆ ಅದಕ್ಕೆ ಭಕ್ತಿಮಾರ್ಗವೊಂದೇ ಸುಲಭ ದಾರಿ
ಕನ್ನಡಪ್ರಭ ವಾರ್ತೆ ಮೈಸೂರು
ದಿವ್ಯತ್ರಯರ ಚಿಂತನೆಗಳಿಂದ ನಾವು ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಬಹುದು ಎಂದು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದಜಿ ಹೇಳಿದರು.ನಗರದ ಶ್ರೀರಾಮಕೃಷ್ಣ ಪರಮಹಂಸ ವೃತ್ತದಲ್ಲಿರುವ ಶ್ರೀರಾಮಕೃಷ್ಣ ಪರಮಹಂಸರ ಪ್ರತಿಮೆ ಆವರಣದಲ್ಲಿ ಶ್ರೀ ರಾಮಕೃಷ್ಣ ಸೇವಾ ಪ್ರತಿಷ್ಠಾನವು ಆಯೋಜಿಸಿದ್ದ ತಿಂಗಳ ತಿಳಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ರಾಮಕೃಷ್ಣರ ಚಿಂತನೆಯಿಂದ ಭಕ್ತಿಯ ಜಲ ಉದ್ಭವಿಸಿ ಶಾಂತಿ ಮೂಡಲಿದೆ. ಇಂದು ನಮ್ಮ ಅಶಾಂತಿಗೆ ಕಾರಣವಾದ ಜಾತಿ, ಮತ ಸೇರಿದಂತೆ ಅನೇಕ ಕಲಹಗಳು ದೂರಾಗಬೇಕಾದರೆ ಅದಕ್ಕೆ ಭಕ್ತಿಮಾರ್ಗವೊಂದೇ ಸುಲಭ ದಾರಿ ಎಂದರಲ್ಲದೇ, ಆ ಭಕ್ತಿ ಮಾರ್ಗವನ್ನು ತಿಳಿಯಪಡಿಸಿರುವ ದಿವ್ಯತ್ರಯರಾದ ಶ್ರೀ ರಾಮಕೃಷ್ಣ, ಸ್ವಾಮಿ ವಿವೇಕಾನಂದ ಹಾಗೂ ಶಾರದಾದೇವಿಯವರ ಚಿಂತನೆಗಳನ್ನು ಪ್ರತಿಯೊಬ್ಬರೂ ಅರಿತು ಆ ಮಾರ್ಗದಲ್ಲಿ ಸಾಗಬೇಕೆಂದು ಕಿವಿಮಾತು ಹೇಳಿದರು.ಕುವೆಂಪು ಅವರು ರಾಮಕೃಷ್ಣ ಪರಮಹಂಸರ ಪ್ರಭಾವ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ. ರಾಜೇಂದ್ರ, ಕುವೆಂಪು ಅವರ ಮೇಲೆ ರಾಮಕೃಷ್ಣರ ಪ್ರಭಾವ ಅಗಾಧವಾಗಿದ್ದರಿಂದಲೇ ಕುವೆಂಪು ಅವರ ಕಾವ್ಯಗಳಲ್ಲಿ ಆಧ್ಯಾತ್ಮಿಕ ಸ್ಪರ್ಶ ಉಂಟಾಯಿತೆಂದರು.
ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿದರು. ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಿ. ಮಾದೇಗೌಡ, ನಗರಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀ ಕಿರಣ್ ಇದ್ದರು.