ಮುಂಬೈಯಲ್ಲಿ ಪರ್ತಗಾಳಿ ಶ್ರೀಗಳಿಂದ ರಾಮನವಮಿ ಆಚರಣೆ

| Published : Apr 18 2024, 02:24 AM IST

ಸಾರಾಂಶ

ಈ ವಿಶೇಷ ದಿನದಂದು ಮುಂಬರುವ ಶ್ರೀ ಮಠದ 550 ವರ್ಷದ ಆಚರಣೆಯ ಪ್ರಯುಕ್ತವಾಗಿ ಮತ್ತು ಶ್ರೀ ದೇವರ ಪ್ರೀತ್ಯರ್ಥಕ್ಕಾಗಿ ವಿಶೇಷವಾಗಿ 550 ಕೋಟಿ ಶ್ರೀ ರಾಮ ನಾಮ ತಾರಕ ತೃಯೋದಶಾಕ್ಷರಿ ಮಂತ್ರದ ಜಪ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಗಳು, ಸಮಾಜ ಬಾಂಧವರಿಗೆ ಈ ಮಹಾಮಂತ್ರದ ಉಪದೇಶವನ್ನು ನೀಡಿ ಆಶೀರ್ವದಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ, ಮುಂಬೈಯ ವಡಾಲದ ಸಂಸ್ಥಾನದ ಶಾಖಾ ಮಠ ಶ್ರೀರಾಮ ಮಂದಿರದಲ್ಲಿ ಮೊಕ್ಕಾಂ ಇದ್ದು, ಬುಧವಾರ ರಾಮನವಮಿ ಪ್ರಯುಕ್ತ ಶ್ರೀ ಸಂಸ್ಥಾನದ ಪಟ್ಟದೇವರು ಮತ್ತು ವಡಾಲ ಶ್ರೀ ರಾಮ ಮಂದಿರದ ಶ್ರೀ ರಾಮಚಂದ್ರ ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು.

ಈ ವಿಶೇಷ ದಿನದಂದು ಮುಂಬರುವ ಶ್ರೀ ಮಠದ 550 ವರ್ಷದ ಆಚರಣೆಯ ಪ್ರಯುಕ್ತವಾಗಿ ಮತ್ತು ಶ್ರೀ ದೇವರ ಪ್ರೀತ್ಯರ್ಥಕ್ಕಾಗಿ ವಿಶೇಷವಾಗಿ 550 ಕೋಟಿ ಶ್ರೀ ರಾಮ ನಾಮ ತಾರಕ ತೃಯೋದಶಾಕ್ಷರಿ ಮಂತ್ರದ ಜಪ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಗಳು, ಸಮಾಜ ಬಾಂಧವರಿಗೆ ಈ ಮಹಾಮಂತ್ರದ ಉಪದೇಶವನ್ನು ನೀಡಿ ಆಶೀರ್ವದಿಸಿದರು.

ಈ ಅಭಿಯಾನವು ಬುಧವಾರದಿಂದ ಪ್ರಾರಂಭವಾಗಿ, 2025ರ ಅಕ್ಟೋಬರ್ 18ರ ವರೆಗೆ ನಿರಂತರವಾಗಿ 550 ದಿನಗಳ ಕಾಲ ನಡೆಯುತ್ತಿದೆ. ಈ ಅಭಿಯಾನದಲ್ಲಿ ಗೌಡ ಸಾರಸ್ವತ ಸಮಾಜ ಬಾಂಧವರು ಹತ್ತಿರದ ಜಪ ಕೇಂದ್ರಕ್ಕೆ ತೆರಳಿ ವೈದಿಕರ ಮಾರ್ಗದರ್ಶನದೊಂದಿಗೆ ಜಪ ನಡೆಸುವುದು ಮತ್ತು ಶ್ರೀರಾಮ ದೇವರ ಕೃಪೆಗೆ ಪಾತ್ರರಾಗುವುದಕ್ಕಾಗಿ ಈಗಾಗಲೇ ದೇವಸ್ಥಾನ ಹಾಗೂ ಶಾಖಾ ಮಠಗಳು ಸೇರಿ ಒಟ್ಟಿಗೆ 108 ಜಪ ಕೇಂದ್ರಗಳು ನೊಂದಾಯಿಸಲ್ಪಟಿದೆ ಮತ್ತು ಸದ್ಯದಲ್ಲಿಯೇ ಇನ್ನಿತರ ದೇವಾಲಯಗಳಲ್ಲಿ ಜಪ ಕೇಂದ್ರಗಳು ಆರಂಭಿಸಿ ಈ ಅಭಿಯಾನಕ್ಕೆ ಕೈಗೂಡಿಸಬೇಕೆಂದು ಶ್ರೀಗಳು ಸಮಾಜ ಬಾಂಧವರಿಗೆ ಕರೆ ನೀಡಿದರು.