ದುಷ್ಟರ ಸಂಹಾರಕ್ಕಾಗಿಯೇ ರಾಮನ ಅವತಾರ

| Published : Jan 23 2024, 01:46 AM IST

ಸಾರಾಂಶ

ರಾಮಚಂದ್ರನ ವ್ಯಕ್ತಿತ್ವವನ್ನು ತಿಳಿದುಕೊಂಡಲ್ಲಿ ಅವನ ಜೀವನ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಶಕಟಪುರ ಜ. ಬದರೀ ಶಂಕರಾಚಾರ್ಯ ವಿದ್ಯಾಭಿನವ ಕೃಷ್ಣಾನಂದತೀರ್ಥ ಶ್ರೀಗಳು ಹೇಳಿದರು.

ಹುಬ್ಬಳ್ಳಿ: ಧರ್ಮ ಸಂಸ್ಥಾನಕ್ಕಾಗಿ ಮಾತ್ರ ಭಗವಂತ ಅವತಾರ ತಾಳದೇ, ದುಷ್ಟರನ್ನು ಶಿಕ್ಷಿಸಲು ನಾನು ಎಲ್ಲ ಯುಗಗಳಲ್ಲೂ ಅವತಾರ ತಾಳುತ್ತೇನೆ ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ ಎಂದು ಶಕಟಪುರ ಜ. ಬದರೀ ಶಂಕರಾಚಾರ್ಯ ವಿದ್ಯಾಭಿನವ ಕೃಷ್ಣಾನಂದತೀರ್ಥ ಶ್ರೀಗಳು ಹೇಳಿದರು.

ಸೋಮವಾರ ಇಲ್ಲಿನ ನವನಗರ ಬ್ರಾಹ್ಮಣ ಸೇವಾ ಸಂಘದ ಶ್ರೀರಾಮ ಮಂದಿರದ ಕಳಸಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.

ರಾಮಾಯಣ ಎಂಬ ಮಹಾಕಾವ್ಯದಲ್ಲಿ ಜ್ಞಾನ, ಶಿಕ್ಷಣ, ಶಿಕ್ಷೆ ಎಲ್ಲವೂ ಇದೆ. ಇಂತಹ ರಾಮಾಯಣ ಪ್ರಾಚೀನವಾದ ಗ್ರಂಥವಾಗಿದ್ದರೂ ಇದರ ವಿಸ್ತಾರ ದೊಡ್ಡದಿದೆ ಎಂದು ವಾಲ್ಮೀಕಿ ವಹರ್ಷಿ ಹೇಳಿದ್ದಾರೆ. ನೂರು ಕೋಟಿಗೂ ಮೇಲು ಎಂದು ವಿಶ್ವಾಮಿತ್ರ ಮಹರ್ಷಿಗಳು ತಿಳಿಸಿದ್ದಾರೆ ಎಂದರು.

ರಾಮಚಂದ್ರನ ವ್ಯಕ್ತಿತ್ವವನ್ನು ತಿಳಿದುಕೊಂಡಲ್ಲಿ ಅವನ ಜೀವನ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ನಾವು ಭಗಂತನ ಅನುಗ್ರಹ ಪಡೆಯಬೇಕೆಂದರೆ ಭಗವಂತನ ಮುಂದೆ ಭಕ್ತಿ ಎಂಬ ಮಾಲೆ ಧರಿಸಿ ನಾಮಸ್ಮರಣೆ ಮಾಡಬೇಕು. ರಾಮಾಯಣವು ಭಕ್ತಿಯ ಕುರಿತ ಹಲವು ದೃಷ್ಟಾಂತಗಳನ್ನು ನಮಗೆ ನೀಡುತ್ತದೆ ಎಂದರು.

ಐದುನೂರು ವರ್ಷಗಳ ಕನಸು ಇಂದು ನನಸಾಗಿದ್ದು, ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣವಾಗಿ ಇಂದು ಫ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇಂತಹ ಶುಭ ಘಳಿಗೆಯಲ್ಲಿಯೇ ನವನಗರ ಬ್ರಾಹ್ಮಣ ಸೇವಾ ಸಂಘದ ಶ್ರೀರಾಮ ಮಂದಿರದ ಕಳಸಾರೋಹಣ ನೆರವೇರಿದೆ ಎಂದರು.

ಮಧುಸೂದನ ಶಾಸ್ತ್ರಿ ಹಂಪಿಹೊಳಿ ಮಾತನಾಡಿ, ಅಯೋಧ್ಯೆಯಲ್ಲಿ ಇಂದು ಧರ್ಮ ಪುರುಷನ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, ನಾವೆಲ್ಲರೂ ರಾಮ ಅನುಸರಿಸಿದ ಮಾರ್ಗದಲ್ಲಿ ನಡೆಯಬೇಕು. ಧರ್ಮಪಾಲನೆ ಮಾಡಬೇಕು ಎಂದರು.

ರಾಜೇಶ್ವರ ಶಾಸ್ತ್ರಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಾದರೆ, ನವನಗರದಲ್ಲಿ ಶ್ರೀರಾಮ ಮಂದಿರದ ಕಳಸ ಪ್ರತಿಷ್ಠಾಪನೆಯಾಗಿದೆ. ಶ್ರೀರಾಮನನ್ನು ಸ್ಮರಣೆ ಮಾಡಿದಲ್ಲಿ ನಮ್ಮೆಲ್ಲರೂಗೂ ಜ್ಞಾನ, ಆರೋಗ್ಯ, ಸಂಪತ್ತು ಲಭಿಸುತ್ತದೆ ಎಂದರು.

ಸತೀಶ ದೀಕ್ಷಿತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಸತೀಶ ದೀಕ್ಷಿತ್, ಉಪಾಧ್ಯಕ್ಷ ನರೇಂದ್ರ ಕುಲಕರ್ಣಿ, ಶಿವರಾತ್ರೋತ್ಸವ ಜಾಗರಣ ಸಮಿತಿ ಅಧ್ಯಕ್ಷ ಎಂ.ಕೆ. ನಾಡಗೇರ, ನ್ಯಾಯಚೂಡಾಮಣಿ ರಾಜೇಶ್ವರ ಶಾಸ್ತ್ರಿ, ಮಧೂಸೂದನ ಶಾಸ್ತ್ರಿ ಹಂಪಿಹೊಳಿ, ಸತೀಶ ಮೂರೂರ ಇದ್ದರು. ರಾಜೇಂದ್ರ ಚವಟೆ ವಂದಿಸಿದರು.