ಮುಂಡರಗಿ: ಸರ್ಕಾರಗಳು ನೀಡುತ್ತಿರುವ ಉಚಿತ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದಕ್ಕೆ ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಸಹಮತ ವ್ಯಕ್ತಪಡಿಸಿದರು.

ಶುಕ್ರವಾರ ತಾಲೂಕಿನ ವಿರುಪಾಪುರ- ಕಲಕೇರಿ ಗ್ರಾಮದ ಶ್ರೀಗುರು ಮುದುಕೇಶ್ವರ ಹಿರೇಮಠದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಜನರಿಗೆ ಆತ್ಮಬಲ ತುಂಬುವ ಕೆಲಸ ಮಾಡಬೇಕು. ಕೈತುಂಬ ಕೆಲಸ, ಅವಕಾಶಗಳನ್ನು ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಸರ್ಕಾರ ಎಲ್ಲಿಯವರೆಗೆ ಜನರನ್ನು ಸಂತೃಪ್ತಿಪಡಿಸಲು ಉಚಿತವಾಗಿ ಹಣವನ್ನು ಕೊಡುತ್ತದೆಯೋ, ಜನರನ್ನು ಸೋಮಾರಿಗಳನ್ನಾಗಿ ಮಾಡುವ ಕೆಲಸ ಮಾಡುತ್ತದೆಯೋ ಅಲ್ಲಿಯವರೆಗೆ ಜನತೆ ಸ್ವಂತ ಕಾಲಿನ ಮೇಲೆ ನಿಂತು ಉದ್ಯೋಗ ಮಾಡಲು ಶಕ್ತಿ ಬರಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಾಗಲಿ, ರಾಷ್ಟ್ರದಲ್ಲಾಗಲಿ, ಮಾಡಬೇಕಾದಂಥ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟಿವೆ. ಆದರೆ ಯಾವುದೇ ಜಾತಿಯವರಿರಲಿ, ಎಲ್ಲ ಜಾತಿ ಜನಾಂಗಗಳಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಮುಂದುವರಿದ ಜನಾಂಗದಲ್ಲಿಯೂ ಕಡುಬಡವರಿದ್ದಾರೆ. ಆದರೆ ಜಾತಿ ಆಧರಿತ ಮೀಸಲಾತಿ ನೀಡುತ್ತಾ ಬಂದರೆ ಉಚ್ಚ ಕುಲದಲ್ಲಿ ಹುಟ್ಟಿದ ಬಡ ಜನಾಂಗಕ್ಕೆ ಅದರಿಂದ ಸಾಕಷ್ಟು ತೊಂದರೆ, ತಾಪತ್ರಯ ಆಗಬಹುದೆಂಬ ದೂರದೃಷ್ಟಿಯನ್ನು ರಾಜಕಾರಣಿಗಳು ಹೊಂದದೆ ಇದ್ದಲ್ಲಿ ಮುಂದೊಂದು ದಿನ ಜಾತಿಯ ಸಂಘರ್ಷಗಳು ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಜಾತಿ, ಧರ್ಮಗಳ ಮಧ್ಯೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ಆರ್ಥಿಕವಾಗಿ ದುರ್ಬಲಗೊಂಡ ಯಾವುದೇ ಸಮುದಾಯದ ಜನ ಇರಲಿ, ಅವರನ್ನು ಮೇಲೆತ್ತುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ಬಹಳಷ್ಟು ಒಳ್ಳೆಯದು ಎಂದರು.


ಸರ್ಕಾರ ಜಾತಿ, ಧರ್ಮಗಳ ಮಧ್ಯೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ಆರ್ಥಿಕವಾಗಿ ದುರ್ಬಲಗೊಂಡ ಯಾವುದೇ ಸಮುದಾಯದ ಜನ ಇರಲಿ, ಅವರನ್ನು ಮೇಲೆತ್ತುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ಬಹಳಷ್ಟು ಒಳ್ಳೆಯದು ಎಂದರು.