ಸಾರಾಂಶ
ಮೈಸೂರು : ಲೋಕಸಭೆಯ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಲಿವೆ. ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗೋದು ಶತಸಿದ್ದ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಬಳಿಕ ದೇಶದ ಎಲ್ಲಾ ರಂಗಗಳಲ್ಲೂ ಸಮಗ್ರ ಅಭಿವೃದ್ಧಿ ಆಗಿದೆ. ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿಯ ಚಿತ್ರಣವೂ ಕಳೆದ 10 ವರ್ಷಗಳಲ್ಲಿ ಸಂಪೂರ್ಣ ಬದಲಾಗಿದೆ. ಮೋದಿ ಪರವಾಗಿ ವಾರಣಾಸಿಯಲ್ಲಿ ಪ್ರಚಾರ ನಡೆಸಿದ ವೇಳೆ ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಕಣ್ಣಾರೆ ಕಂಡೆ ಎಂದರು.
ಮೋದಿ ನಾಯಕತ್ವದಲ್ಲಿ ದೇಶ ಬಲಿಷ್ಠವಾಗಿದೆ. ಮೋದಿಯನ್ನು ಸರಿಗಟ್ಟುವ ನಾಯಕ ಇಂಡಿಯಾ ಮೈತ್ರಿಕೂಟದಲ್ಲಿ ಇಲ್ಲ. ಹೀಗಾಗಿ ದೇಶದ ಜನತೆ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಯಸಿದ್ದಾರೆ. ಕಾಂಗ್ರೆಸ್ ನವರು ಚುನಾವಣೋತ್ತರ ಸಮೀಕ್ಷೆಗಳನ್ನು ಒಪ್ಪದೇ ಹತಾಶಗೊಂಡಿದ್ದಾರೆ. ಮೋದಿ 3ನೇ ಬಾರಿ ಪ್ರಧಾನಿಯಾಗೋದನ್ನು ಯಾರಿಂದಲೂ ತಡೆಯಲು ಆಗಲ್ಲ ಎಂದು ಅವರು ಹೇಳಿದರು.
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವನ್ನು ಬಹಳ ಗಂಭೀರವಾಗಿದ್ದು, ಎನ್ಐಎ ತನಿಖೆಗೆ ವಹಿಸಬೇಕು. ಆ ಮೂಲಕ ಸತ್ಯಾಸತ್ಯತೆ ಬಯಲಿಗೆಳೆಯಬೇಕು. ಈ ಸಂಬಂಧ ಸಚಿವ ನಾಗೇಂದ್ರ ತಲೆ ದಂಡವಾಗಬೇಕು ಎಂದು ಅವರು ಆಗ್ರಹಿಸಿದರು.