ಸಾರಾಂಶ
ರಾಮನಗರ: ಜಿಲ್ಲಾ ಕೇಂದ್ರ ರಾಮನಗರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಚಾಲನೆ ನೀಡಿದರು.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 20.96 ಕೋಟಿ ವೆಚ್ಚದಲ್ಲಿ ರಾಮನಗರ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗೊಳ್ಳಲಿದೆ. ರೈಲ್ವೆ ನಿಲ್ದಾಣದ ಮೇಲ್ದರ್ಜೆ ಹಾಗೂ ಪುನರಾಭಿವೃದ್ಧಿ ಯೋಜನೆಗೆ ಚಾಲನೆ ನೀಡುವ ಸಂಬಂಧ ರಾಮನಗರ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಯಿತು. ಪ್ರಧಾನಿಯವರು ಕಾರ್ಯಕ್ರಮ ಆರಂಭಿಸುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳು ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಮಾಜಿ ಶಾಸಕ ಕೆ.ರಾಜು ಮಾತನಾಡಿ, ರೈಲ್ವೆ ಇಲಾಖೆಯು ಇತ್ತೀಚಿನ ವರ್ಷದಲ್ಲಿ ಹೊಸತನವನ್ನು ರೂಢಿಸಿಕೊಳ್ಳುತ್ತಿದ್ದು, ದೇಶದ ನಿವಾಸಿಗಳಿಗೆ ಉತ್ತಮ ಸೇವೆ ನೀಡುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ದಿನದಲ್ಲಿ ರೈಲ್ವೆ ಇಲಾಖೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ರೈಲ್ವೆ ಅಭಿವೃದ್ಧಿಯು ಸಾಕಷ್ಟು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಲಿದೆ. ರೈಲ್ವೆ ಜಾಲದ ವಿಸ್ತರಣೆಯು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ರೇಷ್ಮೆ ಅಭಿವೃದ್ಧಿ ನಿಮಗದ ಮಾಜಿ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ಲಾಜಿಸ್ಟಿಕ್(ಸಾರಿಗೆ) ವ್ಯವಸ್ಥೆಯು ದೇಶದ ಅರ್ಥ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ತನ್ನದೇ ಆದಂತ ಕೊಡುಗೆ ನೀಡುತ್ತದೆ. ಈ ನಿಟ್ಟಿನಲ್ಲಿ ದೇಶದ ರೈಲ್ವೆ ನಿಲ್ದಾಣದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ ಎಂದು ಹೇಳಿದರು.ಇಡೀ ದೇಶದಲ್ಲಿ 554 ರೈಲ್ವೆ ನಿಲ್ದಾಣವನ್ನು ಪುನಾರಾಭಿವೃದ್ಧಿಗೊಳಿಸುವ ಸಂಬಂಧ 41 ಸಾವಿರ ಕೋಟಿ ವೆಚ್ಚ ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲದೆ, 1500 ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳ ಸೇತುವನೆಗಳ ಸಮರ್ಪಣೆ, ಶಂಕುಸ್ಥಾಪನೆ ನೆರವೇರುತ್ತಿದೆ ಎಂದರು.
ಬಿಜೆಪಿ ರಾಮನಗರ ನಗರ ಮಂಡಲ ಅಧ್ಯಕ್ಷ ದರ್ಶನ್ ಮಾತನಾಡಿ, ದೇಶವೂ ಪ್ರವಾಸೋಧ್ಯಮಕ್ಕೆ ಹೇಳಿ ಮಾಡಿಸಿದೆ. ನಮ್ಮಲ್ಲಿ ಮರಳುಗಾಡು, ಸಮುದ್ರ ಎಲ್ಲವೂ ಒಳಗೊಂಡಿದೆ. ಭಾರತೀಯ ರೇಲ್ವೆಯು ಇವುಗಳನ್ನು ಸಂಧಿಸುವ ಕಾರ್ಯ ಮಾಡುತ್ತಿದೆ. ಕಳೆದ 10 ವರ್ಷದ ಹಿಂದೆ ಭಾರತೀಯ ರೇಲ್ವೆಯು ಪ್ರತಿಗಂಟೆಗೆ 100 ಕಿ.ಮೀ. ವೇಗದಲ್ಲಿ ಮಾತ್ರ ಸಂಚರಿಸುತ್ತಿತ್ತು. ಆದರೆ, ಈ ವ್ಯವಸ್ಥೆ ಬದಲಾಗಿದ್ದು, ಪ್ರಸ್ತುತ 100ರಿಂದ 140 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಭಾರತದಲ್ಲಿ ಈಗಾಗಲೇ ಸಿಮಿ ಹೈಸ್ಟೀಡ್ ಗಳಾದ ವಂದೇ ಭಾರತ್ ಸಂಚರಿಸುತ್ತಿದೆ. ಜತೆಗೆ, ಮುಂಬೈ ಅಲಹಾಬಾದ್ ಬುಲೆಟ್ ರೈಲು ಯೋಜನೆ ಕಾರ್ಯದಲ್ಲಿದೆ. ಇನ್ನು ಚೈನ್ನೈ - ಮೈಸೂರು ಬುಲೆಟ್ ರೈಲು ಒದಗಿಸುವ ಸಂಬಂಧ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಋರುತ್ಯ ರೈಲ್ವೆ ಹಿರಿಯ ಅಧಿಕಾರಿ ಅಮನ್ ಕಠಾರಿಯಾ, ರಾಮನಗರ ರೈಲ್ವೆ ಸ್ಟೇಷನ್ ಮಾಸ್ಟರ್ ಶ್ರೀಕಂಠಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಪ್ರಸಾದ್ ಗೌಡ, ಪದ್ಮನಾಭ್, ಮಂಜು, ಶಿವಾನಂದ, ಚಂದ್ರಶೇಖರ್ ರೆಡ್ಡಿ, ಸಿಂಗ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ ............ರೈಲ್ವೆ ನಿಲ್ದಾಣದಲ್ಲಿ ಇವೆಲ್ಲ ಇರಲಿವೆ :
ಎತ್ತರದ ಪ್ರವೇಶ ನಿಲ್ದಾಣವನ್ನು 950 ಮೀಟರ್ ಎತ್ತರಿಸುವುದು. 4 ವೀಲರ್ಗಳ (4 ಸ್ಲಾಟ್ಗಳು), 2 ವೀಲರ್ಗಳು(6-ಸ್ಲಾಟ್ಗಳು), ವಿಶೇಷ ಚೇತನರಿಗೆ ಪಾರ್ಕಿಂಗ್ ಪ್ರದೇಶ, ಕಡಿಮೆ ಎತ್ತರದ ನೀರಿನ ಪೀಠಗಳು, ಶೌಚಾಲಯ, ವಿಶಾಲವಾದ, ಕಡಿಮೆ ಎತ್ತರದ ಪುಟ್ ಓವರ್ ಸೇತುವೆ, ಪ್ಲಾಟ್ ಫಾರ್ಮ್ ಶೆಲ್ಟರ್ ಅನ್ನು 240 ಮೀಟರ್ ಉದ್ದಕ್ಕೆ ವಿಸ್ತರಿಸಲಾಗುತ್ತಿದೆ. ಚಲಾವಣೆಯಲ್ಲಿರುವ ಪ್ರದೇಶದ ಅಭಿವೃದ್ಧಿಯನ್ನು 340 ಚದರ ಮೀಟರ್ಗೆ ವಿಸ್ತರಣೆ ಮಾಡಲಾಗುತ್ತಿದೆ. ಪಾರ್ಕಿಂಗ್ ಪ್ರದೇಶದ ವಿಸ್ತರಣೆ, ಪಾವತಿಸಿ ಬಳಸುವ ಶೌಚಾಲಯಗಳ ವಿಸ್ತರಣೆ, ಕೆಫೆಟೇರಿಯಾ, ನಿಲ್ದಾಣದಲ್ಲಿ ಎರಡು ಎಸ್ಕಲೇಟರ್ಗಳು ಮತ್ತು ಮೂರು ಲಿಫ್ಟ್ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ವಿದ್ಯುತ್ ನವೀಕರಣಗಳು, ಪ್ರಯಾಣಿಕರ ಮಾಹಿತಿ ಪ್ರಸರಣವನ್ನು ಯೋಜನೆಯಲ್ಲಿ ಒದಗಿಸಿಕೊಡಲಾಗುತ್ತದೆ.26ಕೆಆರ್ ಎಂಎನ್ 1.ಜೆಪಿಜಿಪ್ರಧಾನಿರವರು ವೀಡಿಯೋ ಕಾನ್ಫರೆನ್ಸ್ ಮೂಲಕ ರೇಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ರಸ್ತೆ ಮೇಲ್ಸುತುವೆ ಮತ್ತು ರಸ್ತೆ ಕೆಳ ಸೇತುವೆಗಳ ಸಮರ್ಪಣೆ - ಶುಂಕುಸ್ಥಾಪನಾ ಕಾರ್ಯಕ್ರಮ ಆರಂಭಿಸುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳು ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.