ರಾಮನಗರ: ಕನಕೋತ್ಸವ ಅಂಗವಾಗಿ ಆಯೋಜಿಸಿರುವ ರಾಮೋತ್ಸವ ಕಾರ್ಯಕ್ರಮ ಕಲೆ, ಕ್ರೀಡೆ, ನೃತ್ಯ ಸೇರಿದಂತೆ ಅನೇಕ ಸ್ಪರ್ಧೆಗಳ ಮೂಲಕ ಉತ್ತಮವಾದ ವೇದಿಕೆ ಕಲ್ಪಿಸಿಕೊಟ್ಟಿದೆ. ಯುವಜನರು ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕರೆ ನೀಡಿದರು.
ರಾಮನಗರ: ಕನಕೋತ್ಸವ ಅಂಗವಾಗಿ ಆಯೋಜಿಸಿರುವ ರಾಮೋತ್ಸವ ಕಾರ್ಯಕ್ರಮ ಕಲೆ, ಕ್ರೀಡೆ, ನೃತ್ಯ ಸೇರಿದಂತೆ ಅನೇಕ ಸ್ಪರ್ಧೆಗಳ ಮೂಲಕ ಉತ್ತಮವಾದ ವೇದಿಕೆ ಕಲ್ಪಿಸಿಕೊಟ್ಟಿದೆ. ಯುವಜನರು ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಅವರು, ರಾಮನಗರವು ಅವತಾರ ಪುರುಷ ರಾಮನ ಊರಾಗಿದೆ. ಶ್ರೀ ರಾಮಚಂದ್ರರ ಇತಿಹಾಸವನ್ನು ಶ್ರೀ ರಾಮದೇವರ ಬೆಟ್ಟ ಸಾರುತ್ತದೆ. ರಾಮನ ವೈಭವವನ್ನು ಸಂಭ್ರಮದಿಂದ ಆಚರಿಸಬೇಕೆಂದು ಶಾಸಕರಾದ ಇಕ್ಬಾಲ್ ಹುಸೇನ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ತೀರ್ಮಾನ ಮಾಡಿದ್ದಾರೆ. ಅದರಂತೆ ಇಂದು ಕ್ರೀಡಾಕೂಟದ ಮೂಲಕ ಚಾಲನೆ ನೀಡಿದ್ದೇವೆ ಎಂದರು.ಶ್ರೀ ರಾಮಚಂದ್ರ ಮರ್ಯಾದ ಪುರುಷೋತ್ತಮನಾಗಿದ್ದು, ಉತ್ತಮ ರಾಜ ಆಡಳಿಗಾರ, ಮಾನವರಿಗೆ ಮಾದರಿಯಾಗುವ ಜೀವನ ನಡೆಸಿದಂತಹ ಮಹಾನ್ ಪುರುಷ. ಆತನ ಹೆಸರಿನಲ್ಲಿ ರಾಮೋತ್ಸವದಲ್ಲಿ 20 ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳು, ಮಹಿಳೆಯರು, ಯುವಕರಿಗೆ ಹಲವು ವೇದಿಕೆ ನೀಡಿ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಸಿಕ್ಕಿದ್ದು, ಇಲ್ಲಿ ಆಯ್ಕೆಯಾದವರನ್ನು ಕನಕೋತ್ಸವಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ಕುಮಾರ್ ಮಾತನಾಡಿ, ರಾಮೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಗೆ ಕಸಬಾ, ಕೈಲಂಚಾ ಮತ್ತು ಟೌನ್, ಹಾರೋಹಳ್ಳಿ, ಮರಳವಾಡಿಗಳಲ್ಲಿ ಏಕಕಾಲಕ್ಕೆ ಚಾಲನೆ ಸಿಕ್ಕಿದೆ. ಶಾಸಕರ ನೇತೃತ್ವದಲ್ಲಿ ಹೋಬಳಿ ಮತ್ತು ವಿಧಾನಸಭಾ ಮಟ್ಟದಲ್ಲಿ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.ಕ್ರಿಕೆಟ್, ಕಬ್ಬಡಿ, ವಾಲಿಬಾಲ್, ಥ್ರೋಬಾಲ್, ಶೆಟಲ್, ಮ್ಯಾರಥಾನ್, ಬಾಡಿ ಬಿಲ್ಡ್, ಪ್ಯಾನ್ಸಿಡ್ರೆಸ್, ಡ್ರಾಯಿಂಗ್, ವಾಯ್ಸ್ ಆಫ್ ರಾಮನಗರ, ದೇಶಭಕ್ತಿ, ಜನಪದ ನೃತ್ಯ, ಸಾಂಪ್ರದಾಯಿಕ ಉಡುಗೆ, ರಂಗಗೀತೆಗಳ ಸ್ಪರ್ಧೆ, ರಂಗೋಲಿ, ಪ್ರತಿಭಾ ಪುರಸ್ಕಾರ, ಕಲ್ಯಾಣೋತ್ಸವಗಳು ವಿವಿಧ ವೇದಿಕೆಗಳಲ್ಲಿ ಅನಾವರಣಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಕ್ರೀಡೆ ಸಹಕಾರಿಯಾಗಲಿದೆ. ಯುವ ಜನರು ಸೋಲು-ಗೆಲುವು ಎನ್ನುವುದನ್ನು ಬಿಟ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ, ರಾಮನಗರ ಕೀರ್ತಿಯನ್ನು ಪಸರಿಸಿ ಎಂದು ಹೇಳಿದರು.ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 27 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಎಲ್ಲ ತಂಡದ ಆಟಗಾರರಿಗೆ ಟೀಷರ್ಟ್ ಮತ್ತು ಕಿಟ್ಗಳನ್ನು ಶಾಸಕ ಎಚ್.ಎ.ಇಕ್ಬಾಲ್ಹುಸೇನ್ ವಿತರಿಸಿ ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಪಂದ್ಯಾವಳಿ ಸಂಚಾಲಕರಾದ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ನಗರ ಯುವ ಘಟಕದ ಅಧ್ಯಕ್ಷ ಎಂ.ಮುಷೀರ್, ಎನ್ಎಸ್ಯುಐನ ಎ.ಟಿ.ಕಾರ್ತಿಕ್, ತಬ್ರೇಜ್, ರಂಜಿತ್, ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಮುತ್ತುರಾಜ್, ಸೋಮಶೇಖರ್, ವಿಜಯಕುಮಾರಿ, ಗಿರಿಜಮ್ಮ, ಪವಿತ್ರ, ಜಯಲಕ್ಷ್ಮಮ್ಮ, ಅಜ್ಮದ್, ನಿಜಾಂಷರೀಪ್, ಬೈರೇಗೌಡ, ಸಮದ್, ಗೋವಿಂದರಾಜು, ಅಣ್ಣು, ಮುಖಂಡರಾದ ಷಫಿ, ವಿನೋದ್, ಸುನಿಲ್ ಮತ್ತಿತರರು ಹಾಜರಿದ್ದರು.
6ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.