ಸಾರಾಂಶ
ಪಂಜಾಬ್ ಎದುರು 6 ರನ್ಗಳ ಅಂತರದಲ್ಲಿ ಆರ್ಸಿಬಿ ಗೆಲ್ಲುತ್ತಿದ್ದಂತೆ ತಾಲೂಕು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬಣ್ಣ ಬಣ್ಣದ ಬೃಹತ್ ಪಟಾಕಿಗಳನ್ನು ಸಿಡಿಸಿ ‘ಆರ್ಸಿಬಿ’..... ‘ಆರ್ಸಿಬಿ’ ಘೋಷಣೆ ಕೂಗಿದ ಕ್ರಿಕೆಟ್ ಅಭಿಮಾನಿಗಳು ಅಳವಡಿಸಿದ್ದ ಎಲ್ಇಡಿ ಪರದೆ ಎದುರೇ ಕುಣಿದು ಕುಪ್ಪಳಿಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಪಟ್ಟಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಜೊತೆಗೆ ನಡುರಾತ್ರಿಯಲ್ಲೇ ಬೈಕ್ ರ್ಯಾಲಿಯೊಂದಿಗೆ ಸಂಭ್ರಮಿಸಿದರು.
ತಾಲೂಕು ಕ್ರೀಡಾಂಗಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಐಪಿಎಲ್ ಆರ್ಸಿಬಿ - ಪಂಜಾಬ್ ತಂಡಗಳ ಫೈನಲ್ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ದೊಡ್ಡ ದೊಡ್ಡ ಎಲ್ಇಡಿ ಪರದೆಗಳನ್ನು ಅಳವಡಿಸಿದ್ದ ಕ್ರೀಡಾಸಕ್ತರು, ಪಂದ್ಯದಲ್ಲಿ ಆರ್ ಸಿಬಿ ಚೊಚ್ಚಲ ಕಪ್ ಗೆಲ್ಲುತ್ತಿದ್ದಂತೆ ವಿಜಯೋತ್ಸವ ಆಚರಿಸಿದರು.ಬೆಳಗ್ಗೆಯಿಂದಲೇ ಆರ್ಸಿಬಿ ಗೆಲುವಿಗಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಕ್ರಿಕೆಟ್ ಅಭಿಮಾನಿಗಳು, ಪಂದ್ಯ ಆರಂಭಗೊಳ್ಳುತ್ತಿದ್ದಂತೆ ‘ಈ ಸಲಾ ಕಪ್ ನಮ್ದೇ’ ಎಂಬ ಘೋಷಣೆ ಮೊಳಗಿಸಿ ಆರ್ಸಿಬಿಯನ್ನು ಸಂಭ್ರಮಿಸಿದರು.
ಪಂಜಾಬ್ ಎದುರು 6 ರನ್ಗಳ ಅಂತರದಲ್ಲಿ ಆರ್ಸಿಬಿ ಗೆಲ್ಲುತ್ತಿದ್ದಂತೆ ತಾಲೂಕು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬಣ್ಣ ಬಣ್ಣದ ಬೃಹತ್ ಪಟಾಕಿಗಳನ್ನು ಸಿಡಿಸಿ ‘ಆರ್ಸಿಬಿ’..... ‘ಆರ್ಸಿಬಿ’ ಘೋಷಣೆ ಕೂಗಿದ ಕ್ರಿಕೆಟ್ ಅಭಿಮಾನಿಗಳು ಅಳವಡಿಸಿದ್ದ ಎಲ್ಇಡಿ ಪರದೆ ಎದುರೇ ಕುಣಿದು ಕುಪ್ಪಳಿಸಿದರು.ನಂತರ ಪಟ್ಟಣದ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುರಾತ್ರಿಯಲ್ಲಿಯೂ ಬೈಕ್ ರ್ಯಾಲಿ ನಡೆಸುವ ಮೂಲಕ ಆರ್ಸಿಬಿ ಗೆಲುವನ್ನು ಸಂಭ್ರಮಿಸಿದರು. ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ 18 ವರ್ಷಗಳ ಕನಸು ನನಸಾಯಿತೆಂದು ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಯಲ್ಲಿಯೂ ಆರ್ಸಿಬಿ ಟೀ ಶರ್ಟ್ ಧರಿಸಿದ್ದ ಅಭಿಮಾನಿಗಳ ಶಿಳ್ಳೆ ಪಟಾಕಿಗಳ ಸದ್ದು ಮೊಳಗಿದವು.