ಸಾರಾಂಶ
ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮ ನಿವಾಸಿ ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಕರುಣಾಕರ ಶೆಟ್ಟಿ ಹಾಗೂ ಪೂಜಾ ಶೆಟ್ಟಿ ದಂಪತಿ ಪುತ್ರಿ ಚಿನ್ಮಯಿ (೧೯) ಕಾಲ್ತುಳಿತಕ್ಕೆ ಬಲಿಯಾದ ದುರ್ದೈವಿ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಐಪಿಎಲ್ ಚಾಂಪಿಯನ್ ಆರ್ಸಿಬಿ ತಂಡದ ವಿಜಯೋತ್ಸವ ಸಂದರ್ಭ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರ್ಘಟನೆಯಲ್ಲಿ ಸೋಮವಾರಪೇಟೆ ಮೂಲದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮ ನಿವಾಸಿ ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಕರುಣಾಕರ ಶೆಟ್ಟಿ ಹಾಗೂ ಪೂಜಾ ಶೆಟ್ಟಿ ದಂಪತಿ ಪುತ್ರಿ ಚಿನ್ಮಯಿ (೧೯) ಕಾಲ್ತುಳಿತಕ್ಕೆ ಬಲಿಯಾದ ದುರ್ದೈವಿ.15 ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಿದ ಕರುಣಾಕರ ಶೆಟ್ಟಿ ಕುಟುಂಬ ಅಲ್ಲಿಯೇ ನೆಲೆಸಿದ್ದರು ಎಂದು ಸಂಬಂಧಿ ಹಾನಗಲ್ ನಿವಾಸಿ ಪ್ರತಾಪ್ ಶೆಟ್ಟಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಕರುಣಾಕರ ಶೆಟ್ಟಿ, ಬೆಂಗಳೂರಿನ ದೊಡ್ಡಕಲ್ಲಸಂದ್ರದಲ್ಲಿ ವಾಸವಿದ್ದರು. ಚಿನ್ಮಯಿ ಶೆಟ್ಟಿ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಟೆಕ್ ಮಾಡುತ್ತಿದ್ದರು. ಬೆಳಗ್ಗಿನ ತರಗತಿಯನ್ನು ಮುಗಿಸಿ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಜಯೋತ್ಸವಕ್ಕೆ ತೆರಳಿದ ಸಂದರ್ಭ ನೂಕು ನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಸಿಲುಕಿ ಗೆಳತಿಯರಿಂದ ಪ್ರತ್ಯೇಕಗೊಂಡು ಮೃತಪಟ್ಟಿದ್ದರು.ಚಿನ್ಮಯಿ ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದು, ಎಸ್ಎಸ್ಎಲ್ಸಿಯಲ್ಲಿ ಶೇ.೯೭ ಹಾಗೂ ಪಿಯುಸಿಯಲ್ಲಿ ಶೇ.೯೬ ಅಂಕಗಳನ್ನು ಪಡೆದಿದ್ದಳು. ಮುಂದೆ ಎಂ.ಟೆಕ್. ಮಾಡುವುದಾಗಿ ಇಂಗಿತ ವ್ಯಕ್ತಪಡಿದ್ದಳು. ಕಳೆದ ಐದು ವರ್ಷಗಳಿಂದ ಯಕ್ಷಗಾನದಲ್ಲಿ ವಿಶೇಷ ತರಬೇತಿ ಪಡೆದಿದ್ದಳು ಎಂದು ತಿಳಿಸಿದ್ದಾರೆ.
ಚಿನ್ಮಯಿ ಕ್ರಿಕೆಟ್ ಅಭಿಮಾನಿಯಾಗಿರಲಿಲ್ಲ. ಸಹಪಾಠಿಗಳೊಂದಿಗೆ ಕಾರ್ಯಕ್ರಮಕ್ಕೆ ತೆರಳಿದ್ದಳು ಎಂದು ಕುಟುಂಬಸ್ಥರು ತಿಳಿಸಿದರು.