ಸಾರಾಂಶ
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಆರ್ಸಿಬಿ ಅಭಿಮಾನಿಗಳು ಐಪಿಎಲ್ ಗೆದ್ದ ತಂಡದ ಆಟಗಾರರ ಫ್ಲೆಕ್ಸ್ ಮುಂದೆ ಸಂಭ್ರಮಾಚರಣೆ ಮಾಡಿದರು.
ಯಳಂದೂರು: ಮಂಗಳವಾರ ರಾತ್ರಿ ನಡೆದ ಐಪಿಎಲ್ನ ಪಂದ್ಯಾವಳಿಯ ೧೮ನೇ ಆವೃತ್ತಿಯಲ್ಲಿ ೧೮ ವರ್ಷಗಳ ನಂತರ ಕಪ್ನ್ನು ಗೆದ್ದ ಆರ್ಸಿಬಿ ತಂಡದ ಅಭಿಮಾನಿಗಳು ಮಧ್ಯರಾತ್ರಿ ಹುಚ್ಚೆದ್ದು ಕುಣಿದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಪಟ್ಟಣದ ಕೆಕೆ ರಸ್ತೆ ಹಾಗೂ ಆಶ್ರಯ ಬಡಾವಣೆಯಲ್ಲಿ ದೊಡ್ಡ ದೊಡ್ಡ ಪರದೆಗಳಲ್ಲಿ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದರು. ಕೊನೆಯ ಓವರ್ನ ಮೂರನೇ ಎಸೆತದಿಂದಲೇ ಅಭಿಮಾನಿಗಳಿಗೆ ಗೆಲುವು ನಿಚ್ಚಳವಾಗುತ್ತಿದ್ದಂತೆಯೇ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರ್ಸಿಬಿ ಪರ ಘೋಷಣೆಗಳನ್ನು ಕೂಗುತ್ತಾ ಯುವಕರ ತಂಡ ಬೈಕ್ಗಳಲ್ಲಿ ಸವಾರಿ ಮಾಡಿದರು. ಪಟ್ಟಣದ ಬಸ್ ನಿಲ್ದಾಣ, ಬಳೇಪೇಟೆ ಸರ್ಕಲ್, ಗಾಂಧಿ ಸರ್ಕಲ್, ಎಸ್ಬಿಐ ಸರ್ಕಲ್, ಗೌತಮ್ ಬಡಾವಣೆಯೂ ಸೇರಿದಂತೆ ಎಲ್ಲೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.ರಸ್ತೆಯಲ್ಲೇ ನೃತ್ಯಮಾಡಿದ ಯುವಕರ ತಂಡದ ಚೀರಾಟಗಳು ಜೋರಾಗಿತ್ತು. ಎಲ್ಲೆಡೆ ವಿರಾಟ್ ಕೊಹ್ಲಿ, ಆರ್ಸಿಬಿ ಪರ ಜಯಘೋಷಗಳು ಮೊಳಗಿದವು. ಹೆಣ್ಣು ಮಕ್ಕಳು ಹಾಗೂ ಚಿಕ್ಕ ಮಕ್ಕಳೂ ಕೂಡ ಕುಣಿದು ಕುಪ್ಪಳಿಸಿದರು. ಆರ್ಸಿಬಿ ಹಾಗೂ ೧೮ ನೇ ಸಂಖ್ಯೆಯ ಜರ್ಸಿಗಳನ್ನು ಧರಿಸಿದ್ದ ಯುವಕರ ಗುಂಪು ಎಲ್ಲೆಡೆ ಕಾಣಸಿಕ್ಕಿತು.
ತಾಲೂಕಿನ ಬಿಳಿಗಿರಿರಂಗನಬೆಟ್ಟ, ಗುಂಬಳ್ಳಿ, ಯರಗಂಬಳ್ಳಿ, ಗೌಡಹಳ್ಳಿ, ಹೊನ್ನೂರು, ಕೆಸ್ತೂರು, ಕಂದಹಳ್ಳಿ, ಅಂಬಳೆ, ಗಂಗವಾಡಿ, ಅಗರ-ಮಾಂಬಳ್ಳಿ ಸೇರಿದಂತೆ ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು. ಅಲ್ಲಲ್ಲಿ ಆರ್ಸಿಬಿಯ ಫ್ಲೆಕ್ಸ್ಗಳು ಹಾಗೂ ಬ್ಯಾನರ್ಗಳನ್ನು ಅಳವಡಿಸಿ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಆರ್ಸಿಬಿಯ ಗೆಲವಿನಲ್ಲಿ ಇಡೀ ತಾಲೂಕಿನ ಆರ್ಸಿಬಿಯ ಅಭಿಮಾನಿಗಳು ಈ ಸಂಭ್ರಮಾಚರಣೆಯನ್ನು ಆಚರಿಸುವ ಮೂಲಕ ಈ ಗೆಲುವನ್ನು ಅವಿಸ್ಮರಣೀಯವಾಗಿಸಿಕೊಂಡರು.