ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಕುವೆಂಪು ಅವರು ಕನ್ನಡ ನಾಡಿನ ಅಸ್ಮಿತೆಯಂತಿದ್ದರು. ಅವರ ಬರಹಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಕುವೆಂಪು ಓದು ಕಮ್ಮಟ ಸಹಕಾರಿಯಾಗಲಿದ್ದು ಅವರ ಕೃತಿಗಳ ಮರು ಓದು ಹೊಸವಿಚಾರಗಳನ್ನು ನೀಡುತ್ತದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಹೇಳಿದರು.ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಹಾಗೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕುವೆಂಪು ಓದು, ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಚಾರ್ಯ ಪ್ರೊ.ರಮೇಶ ಆರ್.ಎಚ್. ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರದ ಸದಸ್ಯ ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಕುವೆಂಪು ಓದು ಕಮ್ಮಟವು ಈ ವರ್ಷದ ಕಾರ್ಯಕ್ರಮಗಳು ಇಂಡಿಯಿಂದಲೇ ಪ್ರಾರಂಭಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಭಾಷಾಭಾರತಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ ಎಂದರು. ಕರ್ನಾಟಕ ರಾಜ್ಯ ಮಹಿಳಾ ವಿವಿ ಸಿಂಡಿಕೇಟ್ ಸದಸ್ಯ ಪ್ರೊ.ಎಸ್.ಜೆ.ಮಾಡ್ಯಾಳ ವೇದಿಕೆಯಲ್ಲಿದ್ದರು.
ಮೊದಲ ಗೋಷ್ಠಿಯಲ್ಲಿ ಕುವೆಂಪು ಅವರ ನಾಟಕಗಳು ಕುರಿತು ಸಂಶೋಧಕ ಡಾ.ಎಸ್.ಕೆ.ಕೊಪ್ಪಾ ಉಪನ್ಯಾಸ ನೀಡಿದರು. 2ನೇ ಗೋಷ್ಠಿಯಲ್ಲಿ ಕುವೆಂಪು ಅವರ ವೈಚಾರಿಕ ಬರಹಗಳು ಕುರಿತು ಶಹಾಪುರದ ವಿಮರ್ಶಕ ಸಿ.ಎಸ್.ಬೀಮರಾಯ ಉಪನ್ಯಾಸ ನೀಡಿದರು.ಸಂಜೆ ನಡೆದ ಸಮಾರೋಪದಲ್ಲಿ ಪ್ರಾಚಾರ್ಯ ಪ್ರೊ.ರಮೇಶ ಆರ್.ಎಚ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 25ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಮ್ಮಟದ ಶಿಬಿರಾರ್ಥಿಗಳಾಗಿ ಭಾಗವಹಿಸಿ ಕುವೆಂಪು ಓದು ಮತ್ತು ವಿಶ್ಲೇಷಣೆ ಮಾಡಿದರು. ಕಾರ್ಯಕ್ರಮದ ಸಂಯೋಕ ಡಾ.ರಮೇಶ ಎಸ್. ಕತ್ತಿ ಸ್ವಾಗತಿಸಿದರು. ಕವೀಂದ್ರ ಚಾಬಕಸವಾರ ನಿರೂಪಿಸಿದರು. ಪ್ರೊ. ಕಾಶೀನಾಥ ಜಾಧವ ವಂದಿಸಿದರು. ಪ್ರೊ. ಕಿರಣಕುಮಾರ ರೇವಣಕರ,ಡಾ.ತ್ರಿವೇಣಿ ಬನಸೋಡೆ, ಪ್ರೊ. ಸಂತೋಷ ಗೊರನಾಳ, ಪ್ರೊ.ರವಿಕುಮಾರ ಅರಳಿ ಮೊದಲಾದವರು ಉಪಸ್ಥಿತರಿದ್ದರು.