ಎಲ್ಲ ಕ್ಷೇತ್ರಗಳಂತೆ ಅರಿವಿನ ಲೋಕದ ರಥಕ್ಕೆ ಎರಡು ಚಕ್ರಗಳು. ಒಂದು ಸಾಹಿತ್ಯ ರಚಿಸುವ ಲೇಖಕರಾದರೆ ಮತ್ತೊಂದು ಚಕ್ರ ಓದುಗರು. ಓದುಗರೆಂಬ ಚಕ್ರವನ್ನು ಕಡೆಗಣಿಸಿರುವುದರಿಂದ ಅಕ್ಷರ ಲೋಕದ ಮಹಾ ಪಯಣ ಸಾಗುತ್ತಿಲ್ಲ. ಬದುಕುವ ಮತ್ತು ಎದುರಿಸುವ ಕಲೆಯನ್ನು ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಕಲಿಸುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಭಕ್ತಿಯ ಸಂಕೇತವಾಗಿ ಪ್ರತಿಮನೆಯಲ್ಲಿ ದೇವರ ಮನೆ ಇರುವಂತೆ ಜ್ಞಾನದ ಸಂಕೇತವಾಗಿ ಪ್ರತಿ ಮನೆಯಲ್ಲೂ ಗ್ರಂಥಾಲಯ ಇರಬೇಕು ಎಂದು ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.ನಗರದ ತಾವರೆಗೆರೆಯಲ್ಲಿರುವ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಓದಿನಿಂದ ಬದುಕಿನ ಸವಾಲು ಎದುರಿಸಿ ಗೆಲ್ಲಬಹುದು. ಮನೆಗೊಂದು ಗ್ರಂಥಾಲಯ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ೧೦ ಜನರ ಜಿಲ್ಲಾ ಜಾಗೃತಿ ಸಮಿತಿ ಕಾರ್ಯಪ್ರವೃತ್ತವಾಗಿದೆ ಎಂದರು.ಎಲ್ಲ ಕ್ಷೇತ್ರಗಳಂತೆ ಅರಿವಿನ ಲೋಕದ ರಥಕ್ಕೆ ಎರಡು ಚಕ್ರಗಳು. ಒಂದು ಸಾಹಿತ್ಯ ರಚಿಸುವ ಲೇಖಕರಾದರೆ ಮತ್ತೊಂದು ಚಕ್ರ ಓದುಗರು. ಓದುಗರೆಂಬ ಚಕ್ರವನ್ನು ಕಡೆಗಣಿಸಿರುವುದರಿಂದ ಅಕ್ಷರ ಲೋಕದ ಮಹಾ ಪಯಣ ಸಾಗುತ್ತಿಲ್ಲ. ಬದುಕುವ ಮತ್ತು ಎದುರಿಸುವ ಕಲೆಯನ್ನು ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಕಲಿಸುತ್ತಿಲ್ಲ. ಯಾರೂ ಕೊಡಲಾಗದ್ದನ್ನು ಪುಸ್ತಕಗಳು ಕೊಡುತ್ತವೆ ಎಂದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದ ನಾಥ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳಗಬೇಕು ಅಂದರೆ ಮನೆಗೊಂದು ಗ್ರಂಥಾಲಯ ಅನುಷ್ಠಾನ ಆಗಬೇಕು. ಪುಸ್ತಕಗಳನ್ನು ಏಕಾಗ್ರತೆಯಿಂದ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ ಇದನ್ನು ಯುವ ಪೀಳಿಗೆಯಲ್ಲಿ ಬಿತ್ತಬೇಕು ಎಂದರು.ಅನೇಕ ಮಹಾಪುರುಷರು ಪುಸ್ತಕಗಳನ್ನು ಓದಿ ಮಹಾನ್ ದೊಡ್ಡ ದೊಡ್ಡ ಸಾಧಕರಾಗಿದ್ದಾರೆ. ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಮನೆಯಲ್ಲಿ ಬೆಳೆಸಿದರೆ ಆ ಮನೆತನ ಬೆಳೆಯುತ್ತದೆ. ಆದ್ದರಿಂದ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ ಆ ಮನೆತನವನ್ನು ಉನ್ನತೀಕರಣಗೊಳಿಸುವ ವಿಶಿಷ್ಟ ಆಲೋಚನೆಯಾಗಿದೆ. ಮನೆತನ ಬೆಳೆದರೆ ನೆರೆಹೊರೆಯವರು ಬೆಳೆಯುತ್ತಾರೆ ಎಂದರು.
ನಾ ಮೆಚ್ಚಿದ ಪುಸ್ತಕ- ಸ್ವಾಮಿ ಜಗದಾತ್ಮಾನಂದ ಅವರು ಬರೆದಿರುವ ಬದುಕಲು ಕಲಿಯಿರಿ ಕುರಿತು ಲೇಖಕ ಚಂದ್ರಶೇಖರ್ ದ.ಕೋ.ಹಳ್ಳಿ ಮಾತನಾಡಿದರು. ಸಾಹಿತಿ ತೈಲೂರು ವೆಂಕಟಕೃಷ್ಣ, ಎಸ್ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಜನಪರ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಚಿಕ್ಕಲ್ಲೂರು, ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾರಸವಾಡಿ ಮಹದೇವು,ಡಾ.ಹೇಮಾ, ಡಾ.ಕೆಂಪಮ್ಮ, ಡಾ.ಎಂ.ವಿ.ಧರಣಿಂದ್ರಯ್ಯ, ಬಸವರಾಜು, ಮಂಜು ಮುತ್ತೇಗೆರೆ ಇತರರಿದ್ದರು.